ಪ್ರತಿಭಟನೆ, ಗದ್ದಲ, ಅಧ್ಯಕ್ಷ ವೇದಿಕೆಗೆ ನುಗ್ಗಾಟದ ನಡುವೆ ಬಜೆಟ್ ಮಂಡನೆ
ಬೆಂಗಳೂರು, ಮಾರ್ಚ್ 15– ಆಡಳಿತ ಕಾಂಗ್ರೆಸ್ ಸದಸ್ಯರ ತೀವ್ರ ಪ್ರತಿಭಟನೆ, ಕೂಗಾಟ, ಅಧ್ಯಕ್ಷರ ವೇದಿಕೆಗೆ ನುಗ್ಗಿ ಮಾಡಲೆತ್ನಿಸಿದ ಅಡ್ಡಿಗಳ ನಡುವೆ ಇಂದು ವಿಧಾನಸಭೆಯಲ್ಲಿ ಹಣಕಾಸು ಸಚಿವ ಶ್ರೀ ರಾಮಕೃಷ್ಣ ಹೆಗಡೆ ಅವರು ಮಂದಿನ ಸಾಲಿನ ಆಯವ್ಯಯವನ್ನು ಮಂಡಿಸಿದರು.
ಮೈಸೂರು ವಿಧಾನಸಭೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಹಣಕಾಸು ಸಚಿವರು ತಮ್ಮ ಭಾಷಣವನ್ನು ಪೂರ್ಣವಾಗಿ ಓದಲಾಗದೆ, ಅದನ್ನು ಓದಿದಂತೆ ಪರಿಗಣಿಸಬೇಕೆಂದು ಕೋರುವ ಪರಿಸ್ಥಿತಿ ಬಂದೊದಗಿತು.
ಇಂದು ಆಯವ್ಯಯ ಮಂಡನೆಗೆ ಅವಕಾಶ ನೀಡದಂತೆ ಮಾಡಲು ಹಕ್ಕಿನ ಲೋಪ, ನಿಲುವಳಿ ಸೂಚನೆ, ಲೆಕ್ಕವಿಲ್ಲದಷ್ಟು ಕ್ರಿಯಾಲೋಪಗಳನ್ನು ಎತ್ತಿ ಹೆಜ್ಜೆ ಹೆಜ್ಜೆಗೂ ಅಡ್ಡಿ ತರಲು ಯತ್ನಿಸಿದ ವಿರೋಧ ಪಕ್ಷದ, ಮುಖ್ಯವಾಗಿ ಆಡಳಿತ ಕಾಂಗ್ರೆಸ್ಸಿನ ಸದಸ್ಯರ ಗದ್ದಲದ ನಡುವೆ, ಅಧ್ಯಕ್ಷರ ಅನುಮತಿಯ ಪ್ರಕಾರ ಸಚಿವ ಶ್ರೀ ಹೆಗಡೆ ಅವರು ಆಯವ್ಯಯ ಮಂಡಿಸಲು ಸಭೆಯ ಅನುಮತಿ ಕೋರಿದರು. ಪ್ರತಿಭಟನೆಯ ನಡುವೆ ಆಡಳಿತ ಕಾಂಗ್ರೆಸ್ ಸದಸ್ಯರು ‘ನಾಚಿಕೆಗೇಡು’ ಎಂದು ಸತತವಾಗಿ ಕೂಗಲಾರಂಭಿಸಿದರು.
ಕಾರು ಕಳ್ಳ ಶ್ರೀಮಂತ ತರುಣರ ಪತ್ತೆ
ಬೆಂಗಳೂರು, ಮಾರ್ಚ್ 15– ಕಾಲೇಜುಗಳಲ್ಲಿ ಓದುತ್ತಿರುವ ಯುವಕರೇ ಹೆಚ್ಚಾಗಿರುವ ಅಂತರರಾಜ್ಯ ವಾಹನ ಕಳ್ಳರ ತಂಡವೊಂದನ್ನು ರಾಜ್ಯದ ಸಿ.ಐ.ಡಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಈ ತಂಡಕ್ಕೆ ಸೇರಿದವರೆಲ್ಲ 19–21 ವರ್ಷ ವಯಸ್ಸಿನ ಯುವಕರಾಗಿದ್ದು, ಅವರಲ್ಲಿ ಹೆಚ್ಚು ಮಂದಿ ಸಿರಿವಂತರ ಪುತ್ರರೇ ಆಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.