ಅರಸು ಸಂಪುಟ ವಿರುದ್ಧ ಯತ್ನ ನಿಲ್ಲಿಸದಿದ್ದರೆ ಶಿಸ್ತು ಕ್ರಮ– ಕೆಂಗಲ್ಗೆ ಎಚ್ಚರ
ನವದೆಹಲಿ, ಆಗಸ್ಟ್ 30– ಮೈಸೂರಿನಲ್ಲಿ ದೇವರಾಜ ಅರಸು ಸಂಪುಟವನ್ನು ಉಚ್ಛಾಟಿಸುವ ತಮ್ಮ ಪ್ರಯತ್ನಗಳನ್ನು ನಿಲ್ಲಿಸದಿದ್ದರೆ ಅವರ ವಿರುದ್ಧ ಬಲವಾದ ಶಿಸ್ತು ಕ್ರಮ ಕೈಗೊಳ್ಳಬೇಕಾಗುವುದೆಂದು ಕಾಂಗ್ರೆಸ್ ಅಧ್ಯಕ್ಷ ಶಂಕರ್ ದಯಾ ಶರ್ಮಾರವರು ಮಾಜಿ ರೈಲ್ವೆ ಸಚಿವ ಕೆ. ಹನುಮಂತಯ್ಯರವರಿಗೆ ಅವರು ಇಂದು ತಮ್ಮನ್ನು ಭೇಟಿ ಮಾಡಿದಾಗ ಎಚ್ಚರಿಕೆ ನೀಡಿದರೆಂದು ತಿಳಿದುಬಂದಿದೆ.
ಪಕ್ಷದ ‘ಶುದ್ಧೀಕರಣ’ದ ಹೆಸರಿನಲ್ಲಿ ಮೈಸೂರು ಸಂಪುಟದ ಬಗೆಗೆ ಅವರ ಟೀಕೆ ಕುರಿತು ಹೈಕಮಾಂಡ್ ತೀವ್ರ ಅಭಿಪ್ರಾಯ ತಳೆದಿದೆ ಎಂದು ಶರ್ಮಾ ಸ್ಪಷ್ಟಪಡಿಸಿದುದಾಗಿ ಹೇಳಲಾಗಿದೆ.
ಬಾಂಗ್ಲಾಕ್ಕೆ ಮನ್ನಣೆ ವಿಳಂಬವಾದರೆ ಚಿರಶಾಂತಿಗೆ ಅಡ್ಡಿ
ನವದೆಹಲಿ, ಆಗಸ್ಟ್ 30– ಬಾಂಗ್ಲಾ ದೇಶಕ್ಕೆ ಮಾನ್ಯತೆ ನೀಡುವುದನ್ನು ವಿಳಂಬಗೊಳಿಸಿದರೆ ಚಿರಶಾಂತಿ ಮೂಡಿಸುವ ಮತ್ತು ಬಾಂಧವ್ಯ ಸೌಹಾರ್ದಗೊಳಿಸುವ ಯತ್ನಕ್ಕೆ ಧಕ್ಕೆ ಉಂಟಾಗುವುದೇ ಅಲ್ಲದೆ ಸಿಮ್ಲಾ ಒಪ್ಪಂದದಲ್ಲಿ ರೂಪಿಸಿರುವ ಗುರಿಗಳ ಸಾಧನೆ ವಿಳಂಬವಾಗುವುದು ಎಂದು ಭಾರತ ಪಾಕಿಸ್ತಾನ್ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದೆ.
ಭಾರತ–ಪಾಕಿಸ್ತಾನಗಳ ನಡುವೆ ನಡೆದ ಇತ್ತೀಚಿನ ಮಾತುಕತೆ ಬಗ್ಗೆ ಸಂಸತ್ತಿನ ಉಭಯ ಸದನಗಳಲ್ಲೂ ಇಂದು ಹೇಳಿಕೆ ನೀಡಿದ ವಿದೇಶಾಂಗ ವ್ಯವಹಾರ ಸಚಿವ ಸ್ವರಣ್ ಸಿಂಗ್ ಅವರು ಉಪಖಂಡದಲ್ಲಿ ಉದ್ಭವಿಸಿರುವ ಹೊಸ ಪರಿಸ್ಥಿತಿಯ ವಾಸ್ತವಿಕತೆಯನ್ನು ಪಾಕಿಸ್ತಾನವು ತಡಮಾಡದೆ ಮಾನ್ಯ ಮಾಡುವುದು ಎಂಬುದು ನಮ್ಮ ಆಶಯವಾಗಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.