ADVERTISEMENT

50 ವರ್ಷಗಳ ಹಿಂದೆ: ಕರ್ನಾಟಕಕ್ಕೆ ಬರಲು ಹೊರ ಉದ್ಯಮಿಗಳಿಗೆ ಅರಸು ಕರೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2024, 23:30 IST
Last Updated 12 ಏಪ್ರಿಲ್ 2024, 23:30 IST
   

ಕರ್ನಾಟಕಕ್ಕೆ ಬರಲು ಹೊರ ಉದ್ಯಮಿಗಳಿಗೆ ಅರಸು ಕರೆ

ಸಿರುಗುಪ್ಪ, ಏ. 12– ಹೊರರಾಜ್ಯದ ಉದ್ಯಮಿ ಗಳು ಕರ್ನಾಟಕದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಬೇಕೆಂದು ಮುಖ್ಯಮಂತ್ರಿ ಅರಸು ಅವರು ಇಂದು ಆಹ್ವಾನ ನೀಡಿದರು.

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಬಳಿಯ ದೇಶನೂರಿನಲ್ಲಿ ಕೊಥಾರಿ ಸಕ್ಕರೆ ಕಾರ್ಖಾನೆಯ ಉದ್ಘಾಟನೆಯನ್ನು
ವಿಧ್ಯುಕ್ತವಾಗಿ ಅವರು ಇಂದು ನೆರವೇರಿಸಿದರು.

ADVERTISEMENT

ಉತ್ತರ ಕರ್ನಾಟಕದಲ್ಲಿ ಹತ್ತಿ, ಕಬ್ಬು ಮತ್ತು ಎಣ್ಣೆ ಬೀಜಗಳ ಕೃಷಿ ಸುಧಾರಿಸಿರುವು ದರಿಂದ ವ್ಯವಸಾಯ ಉತ್ಪನ್ನ ಪ್ರಧಾನ ಕೈಗಾರಿಕೆಗಳಿಗೆ ವಿಪುಲ ಅವಕಾಶ ಇದೆ ಎಂದು ಅವರು ಹೇಳಿದರು.

‘ಉದ್ಯಮಗಳನ್ನು ಸ್ಥಾಪಿಸಲು ಇಲ್ಲಿಗೆ ಬಂದ ಮೇಲೆ ನಮ್ಮವರಿಗೇ ಬಹುಪಾಲು ಉದ್ಯೋಗಗಳನ್ನು ಕೊಡಿ’ ಎಂದರು.

ಡೀಸೆಲ್ ಉಳಿಸುವ ಕ್ರಮ: ದೂರ ಪ್ರಯಾಣದ ಬಸ್‌ಗಳು ಬೇಡ ರಾಜ್ಯಗಳಿಗೆ ಕೇಂದ್ರದ ಸಲಹೆ

ನವದೆಹಲಿ, ಏ. 12– ಇನ್ನು ಮುಂದೆ ದೂರ ಪ್ರಯಾಣದ ಬಸ್ ಮಾರ್ಗಗಳಿಗೆ ಅನುಮತಿ ನೀಡಬಾರದೆಂದೂ ಸಾಧ್ಯವಾದ ಕಡೆಗಳಲ್ಲಿ ಈಗಿರುವ ದೂರ ಪ್ರಯಾಣದ ಬಸ್ ಸಂಚಾರ ನಿಲ್ಲಿಸಬೇಕೆಂದೂ ರಸ್ತೆ ಸಾರಿಗೆ ಮತ್ತು ನೌಕಾ ಸಾರಿಗೆ ಸಚಿವ ಖಾತೆ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದೆ.

ಹೆದ್ದಾರಿಗಳಲ್ಲದ ಸಣ್ಣ ಉಪ ರಸ್ತೆಗಳಲ್ಲಿ ಸಂಚರಿಸುವ ಬಸ್ಸುಗಳ ಸಂಖ್ಯೆ ಕಡಿಮೆ ಮಾಡಬೇಕೆಂದೂ ರಾಜ್ಯಗಳಿಗೆ ತಿಳಿಸಲಾಗಿದೆ.

ಇಂಥ ಕ್ರಮಗಳಿಂದ ಡೀಸೆಲ್ ಎಣ್ಣೆ ಬಳಕೆಯನ್ನು ಕಡಿಮೆ ಮಾಡಲು ಹಾಗೂ ರಾಜ್ಯದ ಮುಖ್ಯ ಪಟ್ಟಣಗಳಲ್ಲಿ ಉಪಯೋಗಕ್ಕಾಗಿ ಹೆಚ್ಚುವರಿ ಬಸ್ಸುಗಳನ್ನು ಓಡಿಸಲು ನೆರವಾಗುವುದೆಂದು ಸಚಿವ ಖಾತೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.