ರಾಜರ ಮಾನ್ಯತೆ ರದ್ದು ಆಜ್ಞೆ ರಾಜ್ಯಾಂಗದ ವಿರುದ್ಧ: ಸುಪ್ರೀಂ ಕೋರ್ಟ್
ನವದೆಹಲಿ, ಡಿ. 15– ರಾಜಧನ ಮತ್ತು ಮಾಜಿ ಅರಸರ ವಿಶೇಷ ಹಕ್ಕು ಹಾಗೂ ಸೌಲಭ್ಯಗಳನ್ನು ಕಸಿದುಕೊಂಡಿದ್ದ ರಾಷ್ಟ್ರಪತಿ ಆಜ್ಞೆಯನ್ನು ಸುಪ್ರೀಂ ಕೋರ್ಟ್ ಇಂದು ರದ್ದುಗೊಳಿಸಿತು.
ರಾಜರುಗಳಿಗೆ ಮತ್ತೆ ರಾಜಧನ ಸಂದಾಯ; ಹಿಂದೆ ಅವರಿಗಿದ್ದ ಎಲ್ಲ ವಿಶೇಷ ಹಕ್ಕು ಮತ್ತು ಸೌಲಭ್ಯಗಳು ಮತ್ತೆ ಅವರಿಗೆ– ಇದು ಸುಪ್ರೀಂ ಕೋರ್ಟ್ ತೀರ್ಪಿನ ನೇರ ಪರಿಣಾಮ.
ರಾಜರಿಗೆ ನೀಡಿದ್ದ ಮಾನ್ಯತೆಯನ್ನು ರದ್ದುಗೊಳಿಸಿ ಸೆಪ್ಟೆಂಬರ್ 7ರಂದು ಹೊರಡಿಸಿದ ರಾಷ್ಟ್ರಪತಿ ಆಜ್ಞೆಯು ‘ಅಕ್ರಮ ಆದುದರಿಂದ ಆ ಆಜ್ಞೆಯು ಇಂದಿನಿಂದ ನಿಷ್ಕ್ರಿಯವಾದುದು’ ಎಂದು ಸುಪ್ರೀಂ ಕೋರ್ಟ್ ಬಹುಮತದ ತೀರ್ಪಿನಲ್ಲಿ ತಿಳಿಸಿತು.
ರಾಜಧನ ರದ್ದತಿಗೆ ಸರ್ಕಾರ ಬದ್ಧ: ಪ್ರಧಾನಿ ಭರವಸೆ
ನವದೆಹಲಿ, ಡಿ, 15– ಸೂಕ್ತ ಸಂವಿಧಾನಾತ್ಮಕ ವಿಧಾನಗಳ ಮೂಲಕ ರಾಜಧನ ರದ್ದು ಮಾಡುವ ನೀತಿಗೆ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ಇಂದಿರಾ ಗಾಂಧಿ ಲೋಕಸಭೆಗೆ ಇಂದು ಆಶ್ವಾಸನೆ ನೀಡಿದರು.
ರಾಜರ ಮಾನ್ಯತೆ ರದ್ದು ಮಾಡಿದ್ದ ರಾಷ್ಟ್ರಪತಿ ಆಜ್ಞೆ ವಿರುದ್ಧ ಮಾಜಿ ರಾಜರ ಅರ್ಜಿಯ ಮೇಲೆ ಸುಪ್ರೀಂ ಕೋರ್ಟ್ ಇತ್ತ ತೀರ್ಪಿನ ಬಗ್ಗೆ ಒಂದು ಗಂಟೆ ಕಾಲ ಸಭೆಯಲ್ಲಿ ಉದ್ರಿಕ್ತ ಚರ್ಚೆ ನಡೆದ ನಂತರ ಪ್ರಧಾನಿ ಈ ಹೇಳಿಕೆಯಿತ್ತರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.