ಮಾಜಿ ರಾಜರುಗಳ ಬ್ಯಾಂಕ್ಲೆಕ್ ಹಾಗೂ ಷೇರು ರೂಪದಲ್ಲಿ 10 ಕೋಟಿ ರೂ.
ನವದೆಹಲಿ, ಮಾರ್ಚ್ 6– 35 ಮಂದಿ ರಾಜರುಗಳು ನೀಡಿರುವ ಒಟ್ಟು ಆಸ್ತಿ–ಪಾಸ್ತಿಗಳ ಹೇಳಿಕೆ ಪ್ರಕಾರ ಬ್ಯಾಂಕಿನಲ್ಲಿ 1,20,61,900 ರೂ.ಗಳನ್ನು ಮತ್ತು ಷೇರುಗಳು ಹಾಗೂ ಸೆಕ್ಯೂರಿಟಿಗಳ ರೂಪದಲ್ಲಿ 84,32,919 ರೂ.ಗಳನ್ನು ಹೊಂದಿದ್ದಾರೆ ಎಂದು ಕೇಂದ್ರ ಹಣಕಾಸು ಮಂತ್ರಿ ಶ್ರೀ ವೈ.ಬಿ.ಚವಾಣ್ ಅವರು ಇಂದು ರಾಜ್ಯ ಸಭೆಗೆ ತಿಳಿಸಿದ್ದರು.
ಮಾಜಿ ರಾಜರುಗಳ ಬ್ಯಾಂಕ್ ಲೆಕ್ಕ ಹಾಗೂ ವಿದೇಶಗಳಲ್ಲಿಯ ಆಸ್ತಿ–ಪಾಸ್ತಿ ಬಗ್ಗೆ ವಿವರ ತಿಳಿಸುವಂತೆ ಶ್ರೀ ಭೂಪೇಶ ಗುಪ್ತಾ ಅವರು ಕೇಳಿದ್ದರು.
ರಿಜರ್ವ್ ಬ್ಯಾಂಕ್ ನೋಟೀಸ್ ಕೊಟ್ಟಿದ್ದ ಮೇರೆಗೆ ಎಲ್ಲ ಮಾಜಿ ರಾಜರು ತಮ್ಮ ಆಸ್ತಿ–ಪಾಸ್ತಿಗಳ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆಂದು ಶ್ರೀ ಚವಾಣ್ ಉತ್ತರ ಕೊಟ್ಟರು.
ಅಸ್ಪೃಶ್ಯತೆ ನಿವಾರಣೆ ಬಹುಮಾನ ಯೋಜನೆ ರದ್ದು
ಬೆಂಗಳೂರು, ಮಾರ್ಚ್ 6– ಅಸ್ಪೃಶ್ಯತೆ ನಿವಾರಣೆ ಸಂಬಂಧದಲ್ಲಿ ಬಹುಮಾನ ಪಡೆದ ಗ್ರಾಮಗಳಲ್ಲಿಯೇ ಅದು ಅಸ್ತಿತ್ವದಲ್ಲಿದ್ದುದು ಕಂಡು ಬಂದುದರಿಂದ ಸರ್ಕಾರ ಆ ಬಹುಮಾನ ಯೋಜನೆಯನ್ನು ರದ್ದು ಪಡಿಸಿತೆಂದು ಸಮಾಜ ಕಲ್ಯಾಣ ಸಚಿವ ಶ್ರೀ ಎಂ.ಮಲ್ಲಿಕಾರ್ಜುನಸ್ವಾಮಿ ಅವರು ಇಂದು ವಿಧಾನಸಭೆಯಲ್ಲಿ ತಿಳಿಸಿದರು.
ಶ್ರೀ ಕೆ.ಸಿದ್ದಯ್ಯ (ಕಾಂ–ಸಂತೆಮರಹಳ್ಳಿ) ಅವರ ಪ್ರಶ್ನೆಗೆ ಉತ್ತರ ನೀಡಿದ ಅವರು ಆ ಯೋಜನೆ ರೀತ್ಯ 1966–67ರಲ್ಲಿ 13 ಗ್ರಾಮಪಂಚಾಯಿತಿಗಳಿಗೆ ಪ್ರತಿಯೊಂದಕ್ಕೂ 1500 ರೂ.ಗಳಿಂದ 12,500 ರೂ.ಗಳವರೆಗೆ 67–68ರಲ್ಲಿ 18 ಗ್ರಾಮಪಂಚಾಯಿತಿಗಳಿಗೆ ಪ್ರತಿಯೊಂದಕ್ಕೆ 5000 ರೂ. (ಒಂದಕ್ಕೆ ಮಾತ್ರ 500 ರೂ.) ಮತ್ತು 68–69ರಲ್ಲಿ ನಾಲ್ಕು ಗ್ರಾಮಪಂಚಾಯಿತಿಗಳಿಗೆ ಪ್ರತಿಯೊಂದಕ್ಕೆ 1500 ರೂ.ಗಳಿಂದ 10,000 ರೂ.ಗಳ ವರೆಗೆ ಬಹುಮಾನಗಳನ್ನು ನೀಡಿರುವ ಅಂಕಿ–ಅಂಶಗಳನ್ನು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.