ಒರಿಸ್ಸಾದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ವಿರೋಧ ಪಕ್ಷಗಳ ಸಭಾತ್ಯಾಗ
ನವದೆಹಲಿ, ಮಾರ್ಚ್ 5– ಒರಿಸ್ಸಾದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತರುವ ಘೋಷಣೆ ಪತ್ರವನ್ನು ಇಂದು ರಾಜ್ಯಸಭೆಯ ಮುಂದೆ ಮಂಡಿಸಿದುದರ ವಿರುದ್ಧ ಪ್ರತಿಭಟಿಸಿ ಸಿ.ಪಿ.ಐ., ಮುಸ್ಲಿಂಲೀಗ್ ಮತ್ತು ಕೆಲವು ಪಕ್ಷೇತರರ ವಿನಾ ಇಡೀ ವಿರೋಧ ಪಕ್ಷ ಸಭಾತ್ಯಾಗ ಮಾಡುವ ಮುನ್ನ ಸಂಸ್ಥಾ ಕಾಂಗ್ರೆಸ್ ನಾಯಕ ಮಹಾವೀರ ತ್ಯಾಗಿ ಅವರು, ‘ರಾಷ್ಟ್ರಪತಿಯವರನ್ನು ವಿಚಾರಣೆಗೆ ಗುರಿಪಡಿಸಲು ವಿರೋಧ ಪಕ್ಷ ಅಲೋಚಿಸುತ್ತಿದೆ’ ಎಂದೂ ಸೂಚಿಸಿದರು.
ರಾಷ್ಟ್ರಪತಿಯವರು ಕೇವಲ ಸರ್ಕಾರದ ‘ರಬ್ಬರ್ ಸ್ಟಾಂಪ್’ ಆಗಿ ಕಾರ್ಯ ನಿರ್ವಹಿಸಲು ಅವಕಾಶ ನೀಡಬಾರದು ಎಂದೂ ಅವರು ಒತ್ತಾಯಿಸಿದರು.
ಪ್ರತ್ಯೇಕತೆ ವಿನಾ ಬೇರೇನೂ ಒಪ್ಪುವುದಿಲ್ಲ: ಪ್ರಧಾನಿಗೆ ಸುಬ್ಬಾರೆಡ್ಡಿ ಸ್ಪಷ್ಟನೆ
ನವದೆಹಲಿ, ಮಾರ್ಚ್ 5– ಈಗಿನ ಆಂಧ್ರಪ್ರದೇಶವನ್ನು ವಿಭಜಿಸಿ ತಮಗೆ ಪ್ರತ್ಯೇಕ ರಾಜ್ಯ ರಚಿಸಿ ಕೊಡುವುದರ ವಿನಾ ಬೇರೇನನ್ನೂ ಅಂಗೀಕರಿಸಲು ಆಂಧ್ರದ ಜನ ಸಿದ್ಧರಾಗಿಲ್ಲವೆಂದು ಪ್ರತ್ಯೇಕತಾವಾದಿ ನಾಯಕ ಶ್ರೀ ಬಿ.ವಿ.ಸುಬ್ಬಾರೆಡ್ಡಿ ಅವರು ಇಂದು ಪ್ರಧಾನಿ ಇಂದಿರಾ ಗಾಂಧಿ ಮತ್ತು ಗೃಹಸಚಿವರಿಗೆ ಪ್ರತ್ಯೇಕ ಮಾತುಕತೆಗಳಲ್ಲಿ ತಿಳಿಸಿದರು.
ಪ್ರತ್ಯೇಕತೆ ಬೇಡಿಕೆಗೆ ತಮ್ಮ ವಿರೋಧವಿದೆಯೆಂದು ಪ್ರಧಾನಿಯವರಾಗಲಿ, ಗೃಹಸಚಿವರಾಗಲಿ ಸೂಚಿಸಲಿಲ್ಲ ಎಂದು ಈ ಮಾತುಕತೆಯ ನಂತರ ಸುದ್ದಿಗಾರರ ಜೊತೆ ಮಾತನಾಡುತ್ತಾ ರೆಡ್ಡಿ ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.