ADVERTISEMENT

ಭಾನುವಾರ, 5–10–1969

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2019, 20:00 IST
Last Updated 4 ಅಕ್ಟೋಬರ್ 2019, 20:00 IST

ಖಾಸಗಿ– ಸರ್ಕಾರಿ ಕ್ಷೇತ್ರಗಳ ನಡುವಣ ವಿವಾದ ಅಸಂಬದ್ಧ: ಇಂದಿರಾ

ಮಧುರೆ, ಅ. 4– ಖಾಸಗಿ ಮತ್ತು ಸರ್ಕಾರಿ ವಿಭಾಗಗಳ ನಡುವೆ ಸತತ ನಡೆಯುತ್ತಿರುವ ‘ಘರ್ಷಣೆ ಕೇವಲ ಅಸಂಬದ್ಧ ವಿವಾದ’ ಎಂದು ಪ್ರಧಾನಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ಹೇಳಿದರು.

ಮಧುರೆ– ರಾಮನಾಡು ವಣಿಕ ಸಂಘದ ಸದಸ್ಯರನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಈ ಎರಡು ವಿಭಾಗಗಳೂ ಪರಸ್ಪರ ಪೂರಕವಾಗಿ ಕೆಲಸ ಮಾಡಿದರೆ ಮಾತ್ರ ರಾಷ್ಟ್ರ ಮುನ್ನಡೆಯಬಹುದು ಎಂದು ತಿಳಿಸಿದರು. ಪ್ರಾದೇಶಿಕ ಅಸಮತೆಗಳನ್ನು ಅವರು ಪ್ರಸ್ತಾಪಿಸಿ, ವಿವಿಧ ಪ್ರದೇಶಗಳ ನಡುವೆ ಇರುವ ಆರ್ಥಿಕ ಅಸಮಾನತೆ ಮತ್ತು ವ್ಯತ್ಯಾಸಗಳನ್ನು ಒಮ್ಮೆಲೇ ನಿರ್ಮೂಲ ಮಾಡುವುದು ಸಾಧ್ಯವಿಲ್ಲ. ಈ ವ್ಯತ್ಯಾಸಗಳು ಹೋಗಬೇಕು. ಆದರೆ ಕಾರ್ಯವಿಧಾನ ನಿಧಾನವಾದದ್ದು ಎಂಬುದನ್ನು ತಿಳಿಯಬೇಕು ಎಂದರು.

ADVERTISEMENT

ಮೈಸೂರಿನ ಮೋಹಕತೆ

ನವದೆಹಲಿ, ಅ. 4– ಮೈಸೂರು ರಾಜ್ಯದ ವೈವಿಧ್ಯಪೂರ್ಣ ಜೀವನವನ್ನು ಉಪರಾಷ್ಟ್ರಪತಿ ಜಿ.ಎಸ್. ಪಾಠಕ್ ಅವರು ಇಂದು ಇಲ್ಲಿ ಸ್ಮರಿಸಿದರು. ‘ಮೈಸೂರು ದರ್ಶನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೈಸೂರಿನ ರಾಜ್ಯಪಾಲರಾಗಿ ಇದ್ದ ಎರಡು ವರ್ಷಗಳಲ್ಲಿ ‘ಐತಿಹಾಸಿಕ ಸಂಪ್ರದಾಯ ಹಾಗೂ ನೈಸರ್ಗಿಕ ಸೌಂದರ್ಯದ ಸಿರಿಯನ್ನು ರಾಜ್ಯದಲ್ಲಿ ಹಾಗೂ ಅದರ ಸುತ್ತಮುತ್ತ’ ತಾವು ಕಂಡುದಾಗಿ ಅವರು ಹೇಳಿದರು.

ನಿರಶನದ ಎರಡನೇ ದಿನ ಗಡಿನಾಡು ಗಾಂಧಿ ಆರೋಗ್ಯ ತೃಪ್ತಿಕರ

ನವದೆಹಲಿ, ಅ. 4– ತಮ್ಮ ನಿರಶನ ವ್ರತದ ಎರಡನೇ ದಿನವಾದ ಇಂದು ಖಾನ್ ಅಬ್ದುಲ್ ಗಫಾರ್ ಖಾನರು ಅತ್ಯುತ್ಸಾಹದಿಂದ ನಗುಮುಖದಿಂದ ಹೊರಬಂದು, ಅಸಂಖ್ಯಾತ ಮಂದಿಯ ಅಭಿನಂದನೆಗಳನ್ನು ಕೈಜೋಡಿಸಿ ಕೃತಜ್ಞತೆಯಿಂದ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.