ದ್ಯೂತ ವ್ಯೂಹ
ಬೆಂಗಳೂರು, ಜೂನ್ 9– ಜೂಜಾಟ, ಅದರಲ್ಲೂ ಬಾಜಿ ಕಟ್ಟುವ ಹವ್ಯಾಸ ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಎಂದರೆ ಸಂಬಂಧಪಟ್ಟವರು ಯಾರೇ ಆಗಲಿ ಕಣ್ಣು ಕೆರಳಿಸಬೇಕಾಗಿಲ್ಲ. ಜೂಜು, ಕುದುರೆ ಪಂದ್ಯಗಳಲ್ಲಿ ಆಸಕ್ತಿ ಇರುವವರಿಗೂ, ಬೆಂಗಳೂರಿಗೂ ಹತ್ತಿರದ ನಂಟು ಎಂದು ರಾಜ್ಯದ ಮುಖ್ಯಮಂತ್ರಿಗಳೇ ಹೇಳಿದ್ದಾರೆ.
ಇತ್ತೀಚೆಗೆ ‘ಶುದ್ಧಾಚಾರ’ ದೃಷ್ಟಿ ಬೆಳೆಸಿಕೊಂಡಿರುವ ತಮಿಳುನಾಡು ಸರ್ಕಾರ ಕುದುರೆ ಪಂದ್ಯ ಮತ್ತು ಲಾಟರಿಯನ್ನು ಕೈಬಿಟ್ಟ ಪರಿಣಾಮವಾಗಿ ಮೋಜಿನ ಜೀವನ ನಡೆಸಬಯಸುವ ಅಲ್ಲಿನ ಜನರ ದೃಷ್ಟಿ ಬೆಂಗಳೂರಿನತ್ತ ಹರಿದಿದೆ. ಬೆಂಗಳೂರಿನಲ್ಲಿ ಜೂಜಿನ ಹವ್ಯಾಸ ವಿಪರೀತವಾಗಿ ಹೆಚ್ಚಿದೆ ಎಂಬುದಕ್ಕೆ ಇದೊಂದೇ ಕಾರಣವಲ್ಲ...
ಬಾಜಿ ಕಟ್ಟುವವರಿಗೆ ಇಲ್ಲಿ ‘ಪ್ರೋತ್ಸಾಹಕಾರಿ’ ವಾತಾವರಣ ಇದೆ. ಕಾನೂನುಬದ್ಧವಾಗಿ ನಡೆಸಲು ಅವಕಾಶ ಇದ್ದರೂ, ಕಾನೂನು ವಿರುದ್ಧವಾಗಿ ನಡೆಯುವುದೇ ಜಾಸ್ತಿ. ಕಾನೂನು ಪ್ರಕಾರ ನಡೆಸುವುದಾದರೆ, ಸರಿಯಾದ ಲೆಕ್ಕಪತ್ರ ಇರಿಸಿಕೊಳ್ಳುವ ಹಾಗೂ ತೆರಿಗೆ ಪಾವತಿ ಮಾಡುವ ಹೊಣೆಗಾರಿಕೆ ಅನಿವಾರ್ಯ. ಹೊಣೆಗಾರಿಕೆಯಿಂದ ನುಣುಚಿಕೊಳ್ಳಬಯಸುವವರೇ ಸಂಖ್ಯೆಯಲ್ಲಿ ಜಾಸ್ತಿ ಇರುವುದು ಸ್ವಾಭಾವಿಕ.
ಕೃತಕ ಮಳೆ ಇನ್ನೂ ತೂಗುಯ್ಯಾಲೆಯಲ್ಲಿ
ಬೆಂಗಳೂರು, ಜೂನ್ 9– ಶರಾವತಿ ವಿದ್ಯುಜ್ಜನಕಗಳಿಗೆ ನೀರು ಹರಿಸುವ ಲಿಂಗನಮಕ್ಕಿ ಜಲಾಶಯ ಪ್ರದೇಶದಲ್ಲಿ ಕೃತಕ ವಿಧಾನಗಳಿಂದ ಮಳೆ ಸುರಿಸುವ ಯೋಜನೆ ಇನ್ನೂ ತೂಗುಯ್ಯಾಲೆಯಲ್ಲಿದೆ.
ಕೃತಕ ವಿಧಾನಗಳಿಂದ ಮಳೆ ಸುರಿಸಲು 12 ಲಕ್ಷ ರೂ.ಗಳ ಯೋಜನೆಯೊಂದನ್ನು ವಿದ್ಯುಚ್ಛಕ್ತಿ ಮಂಡಳಿ ರೂಪಿಸಿದೆ. ಒಂದೆರಡು ದಿನದಲ್ಲಿ ಮಳೆ ಬರದಿದ್ದರೆ, ಕೃತಕ ಮಳೆ ಯೋಜನೆ ಕಾರ್ಯಗತಗೊಳಿಸದಿದ್ದರೆ ಸರ್ಕಾರಕ್ಕೆ ಬೇರೆ ಮಾರ್ಗವೇ ಇಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.