ರುಮೇನಿಯದಲ್ಲಿ ಹಸ್ತಕ್ಷೇಪ: ರಷ್ಯಕ್ಕೆ ಜಾನ್ಸನ್ ಎಚ್ಚರಿಕೆ
ಸಾನ್ ಆಂಟೋನಿಯೋ, ಆ. 31– ರುಮೇನಿಯಾದೊಳಕ್ಕೆ ರಷ್ಯಾದ ಸೇನೆ ಕಳಿಸುವ ಸಂಭವವಿದೆಯೆಂಬ ವರದಿಯನ್ನು ಪಡೆದ ನಂತರ ಅಧ್ಯಕ್ಷ ಜಾನ್ಸನ್ ಅವರು ಮಾಸ್ಕೊಗೆ ಎಚ್ಚರಿಕೆಯೊಂದನ್ನಿತ್ತಿದ್ದಾರೆ.
***
ಸಭಾತ್ಯಾಗದ ನಡುವೆ ಚಿನ್ನದ ಹತೋಟಿಗೆ ಅಸ್ತು
ನವದೆಹಲಿ, ಆ. 31– ‘ರಾಜ್ಯಸಭೆ ಎಲ್ಲಕ್ಕೂ ಸಮ್ಮತಿಸುತ್ತದೆ ಎಂದು ಸರ್ಕಾರ ಭಾವಿಸಿದೆ’ ಎಂಬ ನೆಪದಿಂದ ಇಡೀ ವಿರೋಧ ಪಕ್ಷ ಇಂದು ಸಭಾತ್ಯಾಗ ಮಾಡಿತು. ರಾಜ್ಯ ಸಭೆ 1980 ಚಿನ್ನ ಹತೋಟಿ ಮಸೂದೆಗೆ ಅಂಗೀಕಾರವಿತ್ತಿದೆ.
ಈ ಮಸೂದೆ ಲೋಕಸಭೆಯ ಅಂಗೀಕಾರವನ್ನು ಈಗಾಗಲೇ ಪಡೆದಿದೆ.
***
ಪರಿಹಾರ ಕಾರ್ಯಗಳಿಗೆ ರಾಜ್ಯಕ್ಕೆ ಕೇಂದ್ರದಿಂದ ಮತ್ತೆ 1 ಕೋಟಿ ರೂ.
ಬೆಂಗಳೂರು, ಆ. 31– ರಾಜ್ಯದಲ್ಲಿ ಅಭಾವ ಪರಿಹಾರ ಕಾರ್ಯಗಳಿಗಾಗಿ ಕೇಂದ್ರ ಸರ್ಕಾರ ಮತ್ತೆ 1 ಕೋಟಿ ರೂ. ನೀಡಿದೆ. ಈಗಾಗಲೇ ಒಂದೂವರೆ ಕೋಟಿ ರೂ. ಮಂಜೂರು ಮಾಡಿತ್ತು.
ಈವರೆಗೆ ಕೇಂದ್ರ ನೀಡಿರುವ ಮೊಬಲಗು ಸಾಲದೆಂದೂ ಮತ್ತಷ್ಟು ನೀಡುವಂತೆ ಕೇಂದ್ರವನ್ನು ಒತ್ತಾಯಪಡಿಸುವುದಾಗಿಯೂ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಇಂದು ಸುದ್ದಿಗಾರರಿಗೆ ತಿಳಿಸಿದರು.
***
ಸೆಂಟ್ರಲ್ ಕಾಲೇಜ್ ಕರ್ನಾಟಕ ಸಂಘದ ಸುವರ್ಣೋತ್ಸವ ನುಡಿ ಸೇವೆ, ಗುರಿ ಪ್ರಸ್ತಾಪ
ಬೆಂಗಳೂರು, ಆ. 31– ಕನ್ನಡವೆಂದರೆ ಜನ ಮುಖವನ್ನು ಸೊಟ್ಟಗೆ ಮಾಡಿಕೊಳ್ಳುತ್ತಿದ್ದ ಕಾಲದಲ್ಲಿ ಆರಂಭವಾಗಿ ‘ಅಪ್ರಬುದ್ಧ ಕರ್ನಾಟಕವನ್ನು ಪ್ರಬುದ್ಧ ಕರ್ನಾಟಕ’ವನ್ನಾಗಿ ಮಾಡುವುದರಲ್ಲಿ ನೆರವಾದ ನುಡಿಯ ಸೌಂದರ್ಯಕ್ಕೆ ಅಂದವಾದ ಚೌಕಟ್ಟನ್ನು ಹಾಕಿದ್ದ ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘದ ಸುವರ್ಣ ಮಹೋತ್ಸವದ ಉದ್ಘಾಟನೆ ಇಂದು ನಡೆಯಿತು.
ಉತ್ಸವವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು ನುಡಿ ಬಾಂಧವರ ಹೃದಯ ಮಂದಿರಗಳಲ್ಲಿ ಸ್ಥಾನ ಸಂಪಾದಿಸಿ ಪ್ರಗತಿ ಪರಂಪರೆಯಲ್ಲಿ ಉನ್ನತ ಸ್ಥಿತಿಯಲ್ಲಿರುವ ಸಂಘದ ಸೇವೆಯನ್ನು ಗೌರವದಿಂದ
ಸ್ಮರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.