ನಗರದಲ್ಲಿ ಮೂರು ಕಡೆ ಗೋಲಿಬಾರ್: ಐವರ ಸಾವು
ಬೆಂಗಳೂರು, ಜ. 23– ಬಸ್ಗಳ ದಹನ, ಕಲ್ಲಿನ ಸುರಿಮಳೆ, ಅಶ್ರುವಾಯು ಪ್ರಯೋಗ, ಲಾಠಿ ಪ್ರಹಾರಗಳ ಪ್ರಕ್ಷುಬ್ಧ ವಾತಾವರಣದಲ್ಲಿ ಪೋಲೀಸರಿಂದ ಅನೇಕ ಬಾರಿ ಗೋಳಿಬಾರು ನಡೆದು, ಐವರು ಸತ್ತು ಹಲವಾರು ಮಂದಿ ಗಾಯಗೊಂಡು ಬೆಂಗಳೂರು ಇತ್ತೀಚಿನ ಇತಿಹಾಸದಲ್ಲಿ ಭಯಾನಕ ಅನುಭವಕ್ಕೊಳಗಾಯಿತು.
ವ್ಯಾಪಕ ಹಿಂಸಾತ್ಮಕ ಚಟುವಟಿಕೆಗಳು ಮತ್ತು ಪೋಲೀಸರು ನಡೆಸಿದ ಲಾಠಿಪ್ರಹಾರ, ಜನರಿಂದ ಆದ ಕಲ್ಲೆಸತದಿಂದ ಇಪ್ಪತ್ತಕ್ಕೂ ಮೀರಿ ಜನ ಗಾಯಗೊಂಡರು.
ವ್ಯಾಪಕ ಗಲಭೆ: ವಿದ್ಯಾರ್ಥಿ ಅಲ್ಲದವರ ಪಾಲೇ ಹೆಚ್ಚು
ಬೆಂಗಳೂರು, ಜ. 23– ನಿನ್ನೆಯ ದಿನ ಬಹುಮಟ್ಟಿಗೆ ವಿಶ್ವವಿದ್ಯಾನಿಲಯದ ಸುತ್ತಮುತ್ತ ಪ್ರದೇಶದಲ್ಲಿಯೇ ಕೇಂದ್ರೀಕೃತವಾಗಿದ್ದ ಗಲಭೆ ಇಂದು ದಂಡಿನ ಪ್ರದೇಶವೂ ಸೇರಿ ನಗರದ ನಾನಾ ಭಾಗಗಳಿಗೆ ವ್ಯಾಪಿಸಿತು. ಗಂಟೆಗಳು ಉರುಳಿದಂತೆಲ್ಲಾ ವಿದ್ಯಾರ್ಥಿಗಳಲ್ಲದವರ ಪಾಲೇ ಹೆಚ್ಚಿದಂತೆ ಕಂಡು ಬಂದಿತು.
ಮದ್ರಾಸ್ ಶಾಲೆಗಳಲ್ಲಿ ತಮಿಳು, ಇಂಗ್ಲಿಷ್ ಮಾತ್ರ ಬೋಧನೆ: ಅಣ್ಣಾದೊರೆ
ಮದ್ರಾಸ್, ಜ. 23– ತಮಿಳುನಾಡಿನ ಶಾಲೆಗಳಲ್ಲಿ ತಮಿಳು ಮತ್ತು ಇಂಗ್ಲಿಷ್– ಇವೆರಡು ಭಾಷೆಗಳನ್ನು ಮಾತ್ರ ಕಲಿಸಲಾಗುವುದು ಎಂದು ರಾಜ್ಯ ವಿಧಾನ ಸಭೆಯಲ್ಲಿ ಮುಖ್ಯಮಂತ್ರಿ ಶ್ರೀ ಸಿ.ಎನ್. ಅಣ್ಣಾದೊರೆ ಇಂದು ಪ್ರಕಟಿಸಿದರು.
ಉಪಕುಲಪತಿ ಅನುಮತಿ
ಬೆಂಗಳೂರು, ಜ. 23– ವಿದ್ಯಾರ್ಥಿಗಳ ಗುಂಪು ವಿಶ್ವವಿದ್ಯಾನಿಲಯದ ಕ್ಯಾಂಪಸ್ನಲ್ಲಿ ಸೇರಿ ಕಲ್ಲೆಸೆಯುತ್ತಿದ್ದರೆ ಪೋಲೀಸರು ಪ್ರವೇಶಿಸಿ ಅವರನ್ನು ಚದುರಿಸಬಹುದೆಂದು ಬೆಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ವಿ.ಕೆ. ಗೋಕಾಕ್ರವರು ಅನುಮತಿ ನೀಡಿದ್ದಾರೆಂದು ಪೋಲೀಸ್ ಅಧಿಕಾರಿಗಳು ಇಂದು ವರದಿಗಾರರಿಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.