ಎರಡು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಗಿರವಿ ವ್ಯವಹಾರ
ಮದ್ರಾಸ್, ಅ. 5– ಸಣ್ಣಪುಟ್ಟ ಸಾಲಗಳ ನೀಡಿಕೆಗೆ ರಾಷ್ಟ್ರೀಕೃತ ಕೆನರಾ ಬ್ಯಾಂಕ್ ಮತ್ತು ಇಂಡಿಯನ್ ಬ್ಯಾಂಕ್ ಗಿರವಿ ವ್ಯವಹಾರ ಆರಂಭಿಸಬಹುದು.
ಖಾಸಗಿ ಗಿರವಿ ವ್ಯಾಪಾರಿಗಳು ಶೋಷಿಸುತ್ತಿರುವುದರ ಬಗ್ಗೆ ತಮಿಳುನಾಡು ಆಡಳಿತ ಕಾಂಗ್ರೆಸ್ ನಾಯಕರು ಕೇಂದ್ರ ಹಣಕಾಸು ಸಚಿವ ಚವಾಣರ ಗಮನಕ್ಕೆ ತಂದಾಗ ಅವರು ಈ ವಿಷಯವನ್ನು ತಿಳಿಸಿದರೆಂದು ತಮಿಳುನಾಡು ಆಡಳಿತ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೋಸಲರಾಮ್ ಇಂದು ಇಲ್ಲಿ ಹೇಳಿದರು.
ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳಲ್ಲೂ ಸಾರ್ವಜನಿಕ ಸಂಪರ್ಕ ಅಧಿಕಾರಿಗಳನ್ನು ನೇಮಿಸಬೇಕೆಂದು ಈ ನಾಯಕರು ಒತ್ತಾಯ ಮಾಡಿದರೆಂದು ಅವರು ಹೇಳಿದರು. ಸಾಲದ ಅರ್ಜಿಗಳನ್ನು ಪಡೆಯಲು ಹಾಗೂ ಸಲ್ಲಿಸಲು ಜನ
ಎದುರಿಸುತ್ತಿರುವ ಕಷ್ಟಗಳನ್ನು ಸಚಿವರ ಗಮನಕ್ಕೆ ತರಲಾಯಿತು.
ಆಯುರ್ವೇದ ಸುಧಾರಣಾ ಸಲಹೆಗಳ ಪರಿಶೀಲನೆಗೆ ತಜ್ಞರ ಸಮಿತಿ ನೇಮಕ ಸಂಭವ
ಶಿಡ್ಲಘಟ್ಟ, ಅ. 5– ಆಯುರ್ವೇದ ವೈದ್ಯ ಕ್ರಮಗಳ ಸುಧಾರಣೆಗೆ ಸಂಬಂಧಿಸಿದ ಸಲಹೆಗಳನ್ನು ಪರಿಶೀಲಿಸಲು ತಜ್ಞರ ಸಮಿತಿಯೊಂದನ್ನು ನೇಮಿಸುವ ಪ್ರಶ್ನೆಯನ್ನು ರಾಜ್ಯ ಸರ್ಕಾರ ಪರಿಶೀಲಿಸುತ್ತಿದೆಯೆಂದು ಮುಖ್ಯಮಂತ್ರಿ ವೀರೇಂದ್ರ ಪಾಟೀಲರು ಇಂದು ಇಲ್ಲಿ ತಿಳಿಸಿದರು.
ಶಿಡ್ಲಘಟ್ಟ ಕಂಬೈನ್ಡ್ ಡಿಸ್ಪೆನ್ಸರಿ ಆವರಣದಲ್ಲಿ ಡಾ. ಎಸ್ಆರ್ಎನ್ ಮೂರ್ತಿ ರಾವ್ ಹಾಗೂ ಶ್ರೀಮತಿ ಮಹಾಲಕ್ಷ್ಮಮ್ಮ ಅವರು ದಾನವಾಗಿ ನೀಡಿದ ನಿಧಿಯಿಂದ ನಿರ್ಮಿಸಲಾಗುವ ಹೆರಿಗೆ ಆಸ್ಪತ್ರೆಯ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿಗಳು ನೆರವೇರಿಸಿ ಮಾತನಾಡಿದರು. ವಿಧಾನಸಭಾ ಸದಸ್ಯ ಬಿ. ವೆಂಕಟರಾಯಪ್ಪ ಅವರು ಅಧ್ಯಕ್ಷತೆ ವಹಿಸಿದ್ದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.