ಕಾಂಗ್ರೆಸ್ ಕಾರ್ಯಸಮಿತಿ ಆಹ್ವಾನಕ್ಕೆ ಚೆನ್ನಾರೆಡ್ಡಿ, ಕೊಂಡಾ ತಿರಸ್ಕಾರ
ನವದೆಹಲಿ, ಜೂನ್ 19– ತೆಲಂಗಾಣ ಸಮಸ್ಯೆ ಕುರಿತು ಅಭಿಪ್ರಾಯಗಳನ್ನು ತಿಳಿಸಲು ಮಾತುಕತೆಗಾಗಿ ದೆಹಲಿಗೆ ಬರುವಂತೆ ಇಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ನೀಡಿದ್ದ ಆಮಂತ್ರಣವನ್ನು ತೆಲಂಗಾಣ ಚಳವಳಿಯ ಇಬ್ಬರು ಪ್ರಮುಖ ನಾಯಕರಾದ ಡಾ. ಎಂ. ಚೆನ್ನಾರೆಡ್ಡಿ ಮತ್ತು ಕೊಂಡಾ ಲಕ್ಷ್ಮಣ್ ಬಾಪೂಜಿ ಅವರು ತಿರಸ್ಕರಿಸಿದ್ದಾರೆ.
ತೆಲಂಗಾಣ ಸಮಸ್ಯೆಯನ್ನು ಹಾಗೂ ಅಲ್ಲಿ ಮುಂದುವರಿಯುತ್ತಿರುವ ಹಿಂಸಾತ್ಮಕ ಚಳವಳಿಯನ್ನು ಕುರಿತು ಚರ್ಚಿಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಇಂದು ಇಲ್ಲಿ ಸಭೆ ಸೇರಿತ್ತು.
ಆಂಧ್ರದ ಈ ಪ್ರದೇಶಕ್ಕಾಗಿ ಪ್ರತ್ಯೇಕ ರಾಜ್ಯವೊಂದನ್ನು ರಚಿಸಬಾರದೆಂಬ ಒಟ್ಟಭಿಪ್ರಾಯ ಮೂರು ಗಂಟೆಗಳ ಚರ್ಚೆಯ ಮುಕ್ತಾಯದಲ್ಲಿ ರೂಪುಗೊಂಡಿತು.
ಅಂತರ– ರಾಜ್ಯ ಮಂಡಲಿ: ಕೆಂಗಲ್ ಆಯೋಗದ ಶಿಫಾರಸು
ನವದೆಹಲಿ, ಜೂನ್ 19– ಕೇಂದ್ರ– ರಾಜ್ಯ ಬಾಂಧವ್ಯದ ಸಮಸ್ಯೆಗಳನ್ನು ಚರ್ಚಿಸಲು ಹಾಗೂ ಬಗೆಹರಿಸಲು ಅಂತರ– ರಾಜ್ಯ ಮಂಡಲಿಯೊಂದನ್ನು ರಚಿಸಬೇಕೆಂದು ಆಡಳಿತ ಸುಧಾರಣಾ ಆಯೋಗವು ಶಿಫಾರಸು ಮಾಡಿದೆ. ಮಂಡಲಿಯ ನಿರ್ಧಾರ ‘ಶಿಫಾರಸಿನ ರೂಪ’ದಲ್ಲಿರುತ್ತದೆ.
ರಾಜ್ಯಗಳಿಗೆ ಹೆಚ್ಚು ಆಡಳಿತಾತ್ಮಕ ಹಾಗೂ ಆರ್ಥಿಕ ಅಧಿಕಾರಗಳನ್ನು ಕೊಡಬೇಕೆಂದೂ ಆಯೋಗವು ಶಿಫಾರಸು ಮಾಡಿದೆ. ಈ ಶಿಫಾರಸುಗಳು ಆಯೋಗದ ವರದಿಯಲ್ಲಿ ಅಡಕವಾಗಿವೆ. ಈ ವರದಿಯನ್ನು ಆಯೋಗದ ಅಧ್ಯಕ್ಷ ಕೆ.ಹನುಮಂತಯ್ಯನವರು ಇಂದು ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಸಲ್ಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.