ಪೊಲೀಸ್ ಪುಂಡಾಟಿಕೆ ಪ್ರತಿಧ್ವನಿ– ತುರ್ತು ಪರಿಸ್ಥಿತಿ ಬಂದರೆ ಸೇನೆ ನೆರವಿಗೆ ಬಂಗಾಳ ಸರ್ಕಾರದ ಮುನ್ಸೂಚನೆ
ಕಲ್ಕತ್ತ, ಆ. 2– ರಾಜ್ಯ ವಿಧಾನಸಭೆಯಲ್ಲಿ ಕಳೆದ ಗುರುವಾರ ಪುಂಡಾಟ ಎಸಗಿದುದಕ್ಕಾಗಿ ಕೆಲವು ಪೊಲೀಸ್ ಅಧಿಕಾರಿಗಳು ಮತ್ತು ಪೊಲೀಸರ ವಿರುದ್ಧ ತೆಗೆದುಕೊಳ್ಳಬೇಕೆಂದಿರುವ ಕ್ರಮಗಳ ಸಂಬಂಧದಲ್ಲಿ ಅವಶ್ಯವಾದರೆ ನೆರವು ನೀಡಲು ಸಜ್ಜಾಗಿರುವಂತೆ ಪಶ್ಚಿಮ ಬಂಗಾಳ ಸರ್ಕಾರವು ಸೈನ್ಯಕ್ಕೆ ತಿಳಿಸಿದೆ.
ಯಾವುದೇ ತುರ್ತು ಪರಿಸ್ಥಿತಿಯನ್ನಾದರೂ ಎದುರಿಸಲು ಪಶ್ಚಿಮ ಬಂಗಾಳದ ಐದು ವಿವಿಧ ಕೇಂದ್ರಗಳಲ್ಲಿ ಸೈನ್ಯಕ್ಕೆ ಸಿದ್ಧವಾಗಿರುವಂತೆ ತಿಳಿಸಿರುವುದಾಗಿ ಮುಖ್ಯಮಂತ್ರಿ ಅಜಯಕುಮಾರ್ ಮುಖರ್ಜಿ ವರದಿಗಾರರಿಗೆ ತಿಳಿಸಿದರು.
ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿಡಾ. ಎಸ್.ಕೆ.ಚಟರ್ಜಿ
ನವದೆಹಲಿ, ಆ. 2– ಸುಪ್ರಸಿದ್ಧ ವಿದ್ವಾಂಸ ಹಾಗೂ ರಾಷ್ಟ್ರೀಯ ಪ್ರೊಫೆಸರ್ಡಾ. ಸುನೀತಿಕುಮಾರ್ ಚಟರ್ಜಿ ಅವರು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಡಾ. ಜಾಕಿರ್ ಹುಸೇನ್ ಅವರ ನಿಧನದಿಂದ ಈ ಸ್ಥಾನ ತೆರವಾಗಿತ್ತು. ಅಕಾಡೆಮಿಯ ಜನರಲ್ ಕೌನ್ಸಿಲ್ ಡಾ. ಚಟರ್ಜಿ ಅವರನ್ನು ತನ್ನ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದೆಯೆಂದು ಪ್ರಕಟಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.