ADVERTISEMENT

ಶುಕ್ರವಾರ, 13–2–1970

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2020, 19:45 IST
Last Updated 12 ಫೆಬ್ರುವರಿ 2020, 19:45 IST

ಬ್ಯಾಂಕ್‌ ರಾಷ್ಟ್ರೀಕರಣ ಕ್ರಮಬದ್ಧಕ್ಕೆಇಂದು ಸುಗ್ರೀವಾಜ್ಞೆ

ನವದೆಹಲಿ, ಫೆ. 12: ಹದಿನಾಲ್ಕು ಪ್ರಮುಖ ವಾಣಿಜ್ಯ ಬ್ಯಾಂಕುಗಳ ರಾಷ್ಟ್ರೀಕರಣದ ಬಗೆಗೆ ಸುಪ್ರೀಂ ಕೋರ್ಟ್‌ ಎತ್ತಿದ ಆಕ್ಷೇಪಣೆಗೆ ಪರಿಹಾರಗಳನ್ನೊಳಗೊಂಡ ಹೊಸ ಸುಗ್ರೀವಾಜ್ಞೆಯೊಂದನ್ನು ನಾಳೆ ಕೇಂದ್ರ ಸರ್ಕಾರ ಹೊರಡಿಸಲಿದೆ.

ಪ್ರಧಾನಿ ಇಂದಿರಾ ಗಾಂಧಿಯವರ ಅಧ್ಯಕ್ಷತೆಯಲ್ಲಿ ಸೇರಿದ್ದ ಕೇಂದ್ರ ಸಂಪುಟವು ಇಂದು ಈ ನಿರ್ಧಾರ ಕೈಗೊಂಡಿತು.

ADVERTISEMENT

ಸುಪ್ರೀಂ ಕೋರ್ಟ್‌ ತೀರ್ಪಿಗೆ ಮುನ್ನ ಈ ರಾಷ್ಟ್ರೀಕೃತ ಬ್ಯಾಂಕುಗಳಿಗಿದ್ದ ಸ್ಥಾನಮಾನವನ್ನು ಮತ್ತೆ ಒದಗಿಸಿಕೊಟ್ಟು ಅವುಗಳ ರಾಷ್ಟ್ರೀಕರಣವನ್ನು ಕ್ರಮಬದ್ಧಗೊಳಿಸುವುದು ಹೊಸ ಆಜ್ಞೆಯ ಮುಖ್ಯ ಗುರಿ.

ಕಾಫಿ ಕ್ಯೂರಿಂಗ್‌ ನೌಕರರಿಗೆವೇತನ ಮಂಡಲಿ

ಬೆಂಗಳೂರು, ಫೆ. 12: ಕಾಫಿ ಕ್ಯೂರಿಂಗ್‌ ವರ್ಕ್ಸ್‌ಗಳಲ್ಲಿ ನಾನಾ ಬಗೆಯ ಕೆಲಸಗಾರರಿಗೆ ಕನಿಷ್ಠ ವೇತನಗಳನ್ನು ನಿಗದಿ ಮಾಡುವ ಬಗ್ಗೆ ಶಿಫಾರಸು ಸಲ್ಲಿಸಲು ಹಾಸನದ ಅಡ್ವೊಕೇಟ್ ಶ್ರೀ ಜಿ.ಎ. ತಿಮ್ಮಪ್ಪಗೌಡರ ಅಧ್ಯಕ್ಷತೆಯಲ್ಲಿ ಸರ್ಕಾರ ಸಮಿತಿಯೊಂದನ್ನು ರಚಿಸಿದೆ. ಚಿಕ್ಕಮಗಳೂರಿನ ಅಸಿಸ್ಟೆಂಟ್‌ ಲೇಬರ್‌ ಕಮಿಷನರ್‌ ಶ್ರೀ ಎಸ್.ಆರ್‌. ಮಲ್ಲಿಕಾರ್ಜುನ್‌ ಅವರು ಕಾರ್‍ಯದರ್ಶಿಯಾಗಿರುವ ಸಮಿತಿಯ ಅಧಿಕಾರಾವಧಿ ಆರು ತಿಂಗಳು ಮಾತ್ರ.

ಕಾವೇರಿ ವಿವಾದ: ಹೊಸ ಸಲಹೆ

ಮದ್ರಾಸ್‌, ಫೆ. 12: ಕಾವೇರಿ ನೀರು ಹಂಚಿಕೆ ಬಗೆಗೆ ತಮಿಳುನಾಡು, ಮೈಸೂರು ಮತ್ತು ಕೇರಳ ರಾಜ್ಯಗಳಿಗೆ ‘ಕೆಲವು ಹೊಸ ಸಲಹೆ’ಗಳನ್ನು ಕಳುಹಿಸಿರುವುದಾಗಿ ಕೇಂದ್ರ ವಿದ್ಯುತ್‌ ಮತ್ತು ನೀರಾವರಿ ಸಚಿವ ಕೆ.ಎಲ್‌. ರಾವ್‌ ಪತ್ರಕರ್ತರಿಗೆ ತಿಳಿಸಿದರು.

ಆದರೆ, ಅವರು ಆ ಸಲಹೆಗಳನ್ನು ಬಹಿರಂಗಪಡಿಸಲು ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.