ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ: 19–11–1970 ಗುರುವಾರ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2020, 19:30 IST
Last Updated 18 ನವೆಂಬರ್ 2020, 19:30 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ನಿರುದ್ಯೋಗಿ ಕೃಷಿ ಪದವೀಧರರನ್ನು ನೆಲೆಗೊಳಿಸಲು ರಾಜ್ಯದ ಯೋಜನೆ

ಬೆಂಗಳೂರು, ನ. 18– ರಾಜ್ಯದ ನಿರುದ್ಯೋಗಿ ಕೃಷಿ ಪದವೀಧರರನ್ನು ಜಮೀನಿನ ಮೇಲೆ ನೆಲೆಗೊಳಿಸುವ ಬೃಹತ್‌ ಯೋಜನೆಯನ್ನು ಚಿಕ್ಕಮಗಳೂರು ಜಿಲ್ಲೆಯಿಂದ ರಾಜ್ಯ ಸರ್ಕಾರ ಆರಂಭಿಸಲಿದೆ.

ತಲಾ 12 ಎಕರೆ ಭೂಮಿ ಹಾಗೂ ಕೃಷಿಗೆ ಅಗತ್ಯವಾದ ಸೌಕರ್ಯಗಳನ್ನೆಲ್ಲ ಪಡೆಯುವ 50 ಮಂದಿ ನಿರುದ್ಯೋಗಿ ಕೃಷಿ ಪದವೀಧರರನ್ನು ಮೊದಲಿಗೆ ನೆಲೆಗೊಳಿಸಲಾಗುವುದು.

ADVERTISEMENT

ಇಂದು ನಡೆದ ಮಂತ್ರಿಮಂಡಲದ ಸಭೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ 100 ಮಂದಿ ನಿರುದ್ಯೋಗಿಗಳನ್ನು ನೆಲೆಗೊಳಿಸುವ 60 ಲಕ್ಷ ರೂಪಾಯಿಯ ವಿಶೇಷ ಯೋಜನೆಯನ್ನು ಅಂಗೀಕರಿಸಿತು. ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು ಈ ಹಣವನ್ನು ಒದಗಿಸುವುದು, ರಾಜ್ಯ ಸರ್ಕಾರ ಈ ಹಣಕ್ಕೆ ಖಾತರಿ ನಿಲ್ಲುವುದು.

ಎಕ್ಸೈಜ್‌ ತೆರಿಗೆ ರೂಪದಲ್ಲಿ ಶಿಕ್ಷಣ ಶುಲ್ಕ ವಸೂಲಿ ಅಕ್ರಮ: ಸುಪ್ರೀಂ ಕೋರ್ಟ್‌ ತೀರ್ಪು

ನವದೆಹಲಿ, ನ. 18– ಅಬಕಾರಿ ಕಂಟ್ರಾಕ್ಟರುಗಳಿಂದ ಎಕ್ಸೈಜ್‌ ಸುಂಕವಾಗಿ ಶಿಕ್ಷಣ ಶುಲ್ಕ ವಸೂಲಿ ಮಾಡುವುದನ್ನು ರದ್ದುಗೊಳಿಸಿ ಮೈಸೂರು ಹೈಕೋರ್ಟ್‌ ನೀಡಿದ ತೀರ್ಪನ್ನು ಸುಪ್ರೀಂ ಕೋರ್ಟ್‌ನ ಸಂವಿಧಾನಕ್ಕೆ ಸಂಬಂಧಿಸಿದ ಬೆಂಚ್‌ ಇಂದು ಎತ್ತಿಹಿಡಿಯಿತು.

ಶಿಕ್ಷಣ ಶುಲ್ಕವನ್ನು ವಸೂಲಿ ಮಾಡಲು ರಾಜ್ಯ ಸರ್ಕಾರಕ್ಕೆ ಯಾವ ಅಧಿಕಾರವೂ ಇಲ್ಲವೆಂಬ ಹೈಕೋರ್ಟ್‌ನ ತೀರ್ಪನ್ನು ಬದಲಾಯಿಸಲು ಯಾವ ಕಾರಣವೂ ಇಲ್ಲವೆಂದು ತಿಳಿಸಿ, ನ್ಯಾಯಾಲಯವು ರಾಜ್ಯ ಸರ್ಕಾರದ ಅಪೀಲನ್ನು ವಜಾ ಮಾಡಿದೆ.

ಎಕ್ಸೈಜ್‌ ಸುಂಕದ ಅಂಗವಾಗಿ ಶಿಕ್ಷಣ ಶುಲ್ಕವನ್ನು ಮೈಸೂರು ಸರ್ಕಾರವು ಅಬಕಾರಿ ಕಂಟ್ರಾಕ್ಟರುಗಳಿಂದ ವಸೂಲಿ ಮಾಡುತ್ತಿದ್ದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.