ಮಹಾಜನ್ ವರದಿ ಜಾರಿ: ಕಾವೇರಿ ಬಗ್ಗೆ ನ್ಯಾಯಕ್ಕೆ ಪ್ರಧಾನಿಗೆ ಒತ್ತಾಯ
ನವದೆಹಲಿ, ನ. 17– ಮಹಾರಾಷ್ಟ್ರದ ಜತೆ ಮೈಸೂರು ಹೊಂದಿರುವ ಗಡಿ ವಿವಾದ ಮತ್ತು ಮೈಸೂರು– ತಮಿಳುನಾಡು ನಡುವಣ ಕಾವೇರಿ ಜಲವಿವಾದಗಳಿಗೆ ಸಂಬಂಧಿಸಿದಂತೆ ಆಡಳಿತ ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ನಡುವೆ ಯಾವುದೇ ಭಿನ್ನಾಭಿಪ್ರಾಯವೂ ಇಲ್ಲ ಎಂದು ರಾಜ್ಯದ ಸಂಸತ್ ಸದಸ್ಯರು ಪ್ರಧಾನಿಗೆ ಸ್ಪಷ್ಟಪಡಿಸಿದ್ದಾರೆ.
ಮೈಸೂರು ರಾಜ್ಯದ ಎಲ್ಲ ಸಂಸತ್ ಸದಸ್ಯರೂ ಪ್ರಧಾನಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಗಡಿ ವಿವಾದವನ್ನು ಮಹಾಜನ್ ಶಿಫಾರಸುಗಳ ಆಧಾರದ ಮೇಲೆ ಬಗೆಹರಿಸಬೇಕು, ಶಿಫಾರಸುಗಳನ್ನು ಸಂಪೂರ್ಣ ಜಾರಿಗೆ ಕೊಡಬೇಕು ಎಂದು ಒತ್ತಾಯ ಮಾಡಿದ್ದಾರೆ. ‘ಮೈಸೂರು ರಾಜ್ಯದ ಸಂಸತ್ ಸದಸ್ಯರಲ್ಲಿ ಭಿನ್ನಾಭಿ ಪ್ರಾಯವಿಲ್ಲ. ಈ ಬಗ್ಗೆ ಮೈಸೂರು ವಿಧಾನಸಭೆ ಅಂಗೀಕರಿಸಿರುವ ಅವಿರೋಧ ನಿರ್ಣಯಗಳಿಗೆ ನಾವು ಬದ್ಧ’ ಎಂದು ಅವರು ಹೇಳಿದ್ದಾರೆ.
ರಾಷ್ಟ್ರೀಕೃತ ಬ್ಯಾಂಕುಗಳಿಗೆ ವಿಶಾಲ ತಳಹದಿಯ ಆಡಳಿತ ಮಂಡಳಿ ರಚನೆ
ನವದೆಹಲಿ, ನ. 17– ರಾಷ್ಟ್ರೀಕರಣಗೊಳಿಸಲ್ಪಟ್ಟಿರುವ ಹದಿನಾಲ್ಕು ಬ್ಯಾಂಕುಗಳಿಗೆ ಈಗಿನ ತಾತ್ಕಾಲಿಕ ಡೈರೆಕ್ಟರುಗಳ ಮಂಡಳಿಗಳ ಬದಲು ಠೇವಣಿದಾರರು, ಬ್ಯಾಂಕ್ ನೌಕರರು, ರೈತರು, ಕರಕುಶಲ ಕಾರ್ಮಿಕರು ಮುಂತಾದವರಿಗೆ ಪ್ರಾತಿನಿಧ್ಯವುಳ್ಳ ವಿಶಾಲ ತಳಹದಿಯ ಆಡಳಿತ ಮಂಡಳಿಗಳನ್ನು ರಚಿಸಲಾಗುವುದು ಎಂದು ಹಣಕಾಸು ಸಚಿವ ವೈ.ಬಿ. ಚವಾಣ್ ಇಂದು ಸಂಸತ್ನಲ್ಲಿ ಪ್ರಕಟಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.