ರಾಜ್ಯದಲ್ಲಿ ಪ್ರವಾಸಿ ಸ್ಥಳಗಳ ಅಭಿವೃದ್ಧಿ ಬಗ್ಗೆ ಕೇಂದ್ರ ಅಲಕ್ಷ್ಯ: ಲೋಕಸಭೆಯಲ್ಲಿ ಆಪಾದನೆ
ನವದೆಹಲಿ, ಆ. 7– ಪ್ರವಾಸಿ ಸ್ಥಳಗಳ ಅಭಿವೃದ್ಧಿಯಲ್ಲಿ ಮೈಸೂರಿನ ಬಗ್ಗೆ ಕೇಂದ್ರ ಪಕ್ಷಪಾತ ತೋರುತ್ತಿದೆ ಎಂಬ ಆಪಾದನೆಯನ್ನು ಪ್ರವಾಸೋದ್ಯಮ ಹಾಗೂ ನಾಗರಿಕ ವಾಯುಯಾನ ಸಚಿವ ಶ್ರೀ ಕರಣ್ಸಿಂಗ್ರವರು ಇಂದು ಲೋಕಸಭೆಯಲ್ಲಿ ನಿರಾಕರಿಸಿದರು.
ದೇಶದ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಮೈಸೂರಿಗೆ ಹೆಚ್ಚು ಪ್ರಾಮುಖ್ಯ ದೊರೆತಿದೆಯಂದು ಶ್ರೀ ಕೆ. ಲಕ್ಕಪ್ಪನವರಿಗೆ ಡಾ. ಕರಣ್ಸಿಂಗ್ ಭರವಸೆ ಇತ್ತರು.
‘ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ಅಸ್ಸಾಮಿನಿಂದ ಪಂಜಾಬಿನವರೆಗೆ ಅದ್ಭುತವಾದ ಪ್ರವಾಸಿ ಆಕರ್ಷಣೆಗಳನ್ನು ಹೊಂದಿರುವ ದೇಶ ನಮ್ಮದು. ಪ್ರವಾಸದ ದೃಷ್ಟಿಯಿಂದ ಮಹತ್ವ ಪಡೆದಿರುವ ಎಲ್ಲ ಸ್ಥಳಗಳನ್ನೂ ತತ್ಕ್ಷಣವೇ ಅಭಿವೃದ್ಧಿಪಡಿಸುವುದು ಸಾಧ್ಯವಿಲ್ಲ. ಲಭ್ಯವಿರುವ ಸಂಪನ್ಮೂಲಗಳ ಮಿತಿಯೊಳಗೆ ಯಾವುದಕ್ಕೆ ಪ್ರಾಶಸ್ತ್ಯ ನೀಡಬೇಕೆಂಬ ಬಗ್ಗೆ ಕೆಲವು ಕಟ್ಟುನಿಟ್ಟಾದ ನಿಯಮಗಳನ್ನು ನಾವು ಪಾಲಿಸುವುದು ಅಗತ್ಯವಾಗಿದೆ’ ಎಂದು ಡಾ. ಸಿಂಗ್ ಹೇಳಿದರು.
ಜಮೀನು ಬೇಡಿಕೆ ಅರ್ಜಿ: ಶೀಘ್ರ ಇತ್ಯರ್ಥ ಪರಿಶೀಲನೆಯಲ್ಲಿ
ಬೆಂಗಳೂರು, ಆ. 7– ಸ್ವಂತ ಸಾಗುವಳಿಗಾಗಿ ಜಮೀನನ್ನು ಪಡೆಯುವ ಸಂಬಂಧದ ಅರ್ಜಿಗಳ ಶೀಘ್ರ ಇತ್ಯರ್ಥಕ್ಕೆ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಮುನ್ಸೀಫರನ್ನು ನೇಮಿಸುವ ಸೂಚನೆಯು ಸರ್ಕಾರ ಮತ್ತು ಹೈಕೋರ್ಟಿನ ಪರಿಶೀಲನೆಯಲ್ಲಿದೆ.
ತರಿ ಮತ್ತು ಖುಷ್ಕಿ ಜಮೀನಿನ ವರ್ಗೀಕರಣದ ಸಂಬಂಧದಲ್ಲಿ ಕೆಲವೊಂದು ಗೊಂದಲಗಳನ್ನು ನಿವಾರಿಸಲು ಸರ್ಕಾರ ಆದೇಶವೊಂದನ್ನು ಹೊರಡಿಸಲಿದೆ. ಇದರ ಹಿಂದೆಯೇ ಭೂಸುಧಾರಣಾ ಕಾನೂನಿಗೆ ಇದಕ್ಕೆ ಸಂಬಂಧಿಸಿದ ತಿದ್ದುಪಡಿ ತರಲಾಗುವುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.