ADVERTISEMENT

25 ವರ್ಷಗಳ ಹಿಂದೆ: ಶನಿವಾರ, ಆಗಸ್ಟ್‌ 26, 1995

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2020, 15:54 IST
Last Updated 25 ಆಗಸ್ಟ್ 2020, 15:54 IST
   

ಆಂಧ್ರ: ಗದ್ದುಗೆ ಏರಲು ಎನ್‌ಟಿಆರ್‌ ಅಳಿಯನ ಸಿದ್ಧತೆ

ಹೈದರಾಬಾದ್‌, ಆ.25(ಪಿಟಿಐ)– ಆಂಧ್ರಪ್ರದೇಶದಲ್ಲಿ ಎನ್‌.ಟಿ. ರಾಮರಾವ್ ನಾಯಕತ್ವದ ವಿರುದ್ಧ ಬಂಡಾಯ ಎದ್ದಿರುವ ಅಳಿಯ ಚಂದ್ರಬಾಬು ನಾಯ್ಡು ಅವರು ಅಧಿಕಾರದ ಗದ್ದುಗೆ ಏರಲು ಸರ್ವಸನ್ನದ್ಧರಾಗಿದ್ದಾರೆ. ತೆಲುಗುದೇಶಂನ ದಿಢೀರ್‌ ವಿಭಜನೆಯಿಂದ ಕಂಗೆಟ್ಟ ಮುಖ್ಯಮಂತ್ರಿ ಅವರು ವಿಧಾನಸಭೆ ವಿಸರ್ಜಿಸಲು ಇಂದು ರಾಜ್ಯಪಾಲರಿಗೆ ಶಿಫಾರಸು ಮಾಡಿದರು.

ಎನ್‌ಟಿಆರ್‌ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದ ಎನ್‌. ಚಂದ್ರಬಾಬು ನಾಯ್ಡು ಅವರ ನೇತೃತ್ವದ ವಿಭಜಿತ ತೆಲುಗು ದೇಶಂ ಬಣವು ತಮಗೆ ಬಹುಮತವಿದ್ದು ಸರ್ಕಾರ ರಚಿಸಲು ಅವಕಾಶ ನೀಡಬೇಕು ಎಂದು ರಾಜ್ಯಪಾಲ ಕೃಷ್ಣಕಾಂತ್‌ ಅವರನ್ನು ಇಂದು ಕೋರಿತು. ಈ ಹಿನ್ನೆಲೆಯಲ್ಲಿ ನಾಯ್ಡು ಬೆಂಬಲಿಗರ ತಲೆಎಣಿಕೆ ನಡೆಸಿದ ಸ್ಪೀಕರ್‌ ರಾಮಕೃಷ್ಣುಡು ಅವರ ಶಿಫಾರಸಿನ ಮೇಲೆ ನಾಯ್ಡು ಅವರು ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸುವುದು ಖಚಿತವಾಗಿದೆ.

ADVERTISEMENT

ಗ್ರಾನೈಟ್‌ ಹಗರಣದ ತನಿಖೆಗೆ ಸದನ ಸಮಿತಿ

ಬೆಂಗಳೂರು, ಆ.25– ಗ್ರಾನೈಟ್‌ ಗಣಿಗಾರಿಕೆ ಅವ್ಯವಹಾರ– ಖೋಟಾ ರಹದಾರಿ ಪತ್ರಗಳ ಹಗರಣ ಸಂಬಂಧದಲ್ಲಿ ತನಿಖೆ ನಡೆಸಲು ಜನತಾದಳದ ಕೆ.ಎನ್‌. ನಾಗೇಗೌಡರ ಅಧ್ಯಕ್ಷತೆಯಲ್ಲಿ ಜಂಟಿ ಸದನ ಸಮಿತಿ ರಚಿಸಿರುವುದನ್ನು ವಿಧಾನ ಮಂಡಲದ ಉಭಯ ಸದನಗಳಲ್ಲಿ ಇಂದು ಪ್ರಕಟಿಸಲಾಯಿತು. ಇದರಿಂದಾಗಿ ಮೂರು ದಿನಗಳ ಬಿಕ್ಕಟ್ಟು ಅಂತ್ಯಗೊಂಡಿತು.

ಜಂಟಿ ಸದನ ಸಮಿತಿ ರಚನೆಗೆ ಸರ್ಕಾರ ಮುಂದಾದ್ದರಿಂದ ಪ್ರಮುಖ ವಿರೋಧ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಭಾರತೀಯ ಜನತಾ ಪಕ್ಷಗಳು ಉಭಯ ಸದನಗಳಲ್ಲಿ ಕಳೆದ ಮೂರು ದಿನಗಳಿಂದ ನಡೆಸುತ್ತಿದ್ದ ಧರಣಿಯನ್ನು ಹಿಂತೆಗೆದುಕೊಂಡವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.