ದೇವೇಗೌಡರ ಮಾನಹಾನಿ ಯತ್ನ: ಪ್ರೊ.ಗೌಡ ಆರೋಪಿ
ನವದೆಹಲಿ, ಮೇ 8 (ಪಿಟಿಐ): ದೆಹಲಿ ನ್ಯಾಯಾಲಯವು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಬಗ್ಗೆ ಎರಡು ವಿವಾದಾತ್ಮಕ ಪುಸ್ತಕಗಳನ್ನು ಬರೆದ ಮಾಜಿ ಲೋಕಸಭಾ ಸದಸ್ಯ ಪ್ರೊ. ವೆಂಕಟಗಿರಿ ಗೌಡ ಹಾಗೂ ಪ್ರಕಾಶಕ ಗೋಪಾಲಕೃಷ್ಣನ್ ಅವರನ್ನು ಮಾನಹಾನಿಗೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿಗಳೆಂದು ಪರಿಗಣಿಸಿದೆ.
ಸೆಷೆನ್ಸ್ ನ್ಯಾಯಾಧೀಶರಾದ ಇಂದ್ರಮಿತ್ ಕೌರ್ ಇಂದು ನೀಡಿರುವ ತೀರ್ಪಿನಲ್ಲಿ ಮೇಲುನೋಟಕ್ಕೆ ಅವರನ್ನು ಆರೋಪಿಗಳೆಂದು ಪರಿಗಣಿಸಲು ಸಾಕಷ್ಟು ಸಾಕ್ಷ್ಯಾಧಾರಗಳಿದ್ದು ವಿಚಾರಣೆಗೆ ಒಳಪಡಿಸಬಹುದೆಂದು ತೀರ್ಪು ನೀಡಿದ್ದಾರೆ.
ಇದಕ್ಕೆ ಮೊದಲು ದೇವೇಗೌಡರ ಪರ ವಕೀಲ ಮಾನ್ ಪುಸ್ತಕಗಳಲ್ಲಿ ದೇವೇಗೌಡರಿಗೆ ಮಾನಹಾನಿಯಾಗುವಂತಹ ಹಲವಾರು ಅಂಶಗಳು ಇವೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಗೃಹ ಸಚಿವಾಲಯವು ಆರೋಪಿ ಗಳ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಅನುಮತಿ ನೀಡಿದೆ ಎಂದರು.
ಸೋನಿಯಾ ಈಗ ಕಾಂಗ್ರೆಸ್ ಸದಸ್ಯೆ
ನವದೆಹಲಿ, ಮೇ 8 (ಪಿಟಿಐ)– ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪತ್ನಿ ಸೋನಿಯಾ ಗಾಂಧಿ ಅವರು ಈಗ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸದಸ್ಯರು.
ಈ ಬಗ್ಗೆ ಅಧಿಕೃತ ಪ್ರಕಟಣೆ ಸದ್ಯದಲ್ಲೇ ಹೊರ ಬೀಳಲಿದೆ. ಈಗತಾನೆ ಅಂತ್ಯಗೊಂಡ ಪಕ್ಷದ ಪ್ರಾಥಮಿಕ ಸದಸ್ಯತ್ವ ನೋಂದಣಿ ಕಾರ್ಯಕ್ರಮದಲ್ಲಿ ಸೋನಿಯಾ ಅವರು ಸದಸ್ಯರಾಗಿ ಪಕ್ಷ ಸೇರಿದ್ದಾರೆ. ರಾಜೀವ್ ಗಾಂಧಿ ಅವರು 1991ರಲ್ಲಿ ಹತ್ಯೆಯ ನಂತರ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನ ವಹಿಸಿ ಕೊಳ್ಳುವಂತೆ ಆಹ್ವಾನಿಸಲಾಯಿತು. ಆದರೆ ಸೋನಿಯಾ, ಸಕ್ರಿಯ ರಾಜಕಾರಣದಿಂದ ದೂರವಿರುವುದಾಗಿ ಹೇಳಿ ಆಹ್ವಾನವನ್ನು ನಿರಾಕರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.