ADVERTISEMENT

50 ವರ್ಷಗಳ ಹಿಂದೆ ಮಂಗಳವಾರ 22.6.1971

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 20:10 IST
Last Updated 21 ಜೂನ್ 2021, 20:10 IST
   

ಸಚಿವರು, ಕಾಂಗ್ರೆಸ್ಸಿಗರ ದುಂದು, ಭೋಗ ಜೀವನ ಕುರಿತು ಉಗ್ರ ಟೀಕೆ

ನವದೆಹಲಿ, ಜೂನ್ 21– ಸಚಿವರು ಹಾಗೂ ಇನ್ನಿತರ ಕಾಂಗ್ರೆಸ್ ಕಾರ್ಯಕರ್ತರು ದುಂದುವೆಚ್ಚ ಮತ್ತು ಭೋಗಜೀವನ ತ್ಯಜಿಸಿ ಮಿತವ್ಯಯ ಹಾಗೂ ಸರಳ ಜೀವನ ವನ್ನು ಆಚರಣೆಯಲ್ಲಿ ತರುವ ಅಗತ್ಯವನ್ನು ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ಒಪ್ಪಿಕೊಂಡರು.

ಆಡಳಿತ ಕಾಂಗ್ರೆಸ್ ಸಂಸತ್ ಪಕ್ಷದ ಕಾರ್ಯನಿರ್ವಾಹಕ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಬಾಂಗ್ಲಾ ದೇಶದ ನಿರಾಶ್ರಿತರ ಪ್ರವಾಹದ ಕಾರಣ ರಾಷ್ಟ್ರವು ಇಂದು ಎದುರಿಸುತ್ತಿರುವ ಸಂಕಷ್ಟದ ಸ್ಥಿತಿಯಲ್ಲಿ ಮಿತವ್ಯಯ ಅತ್ಯಗತ್ಯವೆಂದು ನುಡಿದರೆಂದು ವರದಿಯಾಗಿದೆ.

ADVERTISEMENT

ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಅರ್ಜುನ ಅರೋರ ಅವರು, ಸಚಿವರುಗಳ ಜೀವನವಿಧಾನ, ಅವರು ವಾಸಿಸುವ ಭವ್ಯ ಭವನಗಳು, ದುಬಾರಿಯ ಪೀಠೋಪಕರಣಗಳ ಬಳಕೆ ಮೊದಲಾದವುಗಳ ಬಗ್ಗೆ ಕಟುವಾಗಿ ಟೀಕಿಸಿದರು.

ಪಕ್ಷಾಂತರ ತಡೆಗೆ ಶೀಘ್ರವೇ ಮಸೂದೆ ಮೊಹ್ಸಿನ್ ಭರವಸೆ

ನವದೆಹಲಿ, ಜೂನ್ 21– ಗುಜರಾತಿನಲ್ಲಿ ಮೇ 31ರಂದು ರಾಷ್ಟ್ರಪತಿ ಆಡಳಿತ ಜಾರಿಗೆ ತಂದುದನ್ನು ಲೋಕಸಭೆ ಇಂದು ಅನುಮೋದಿಸಿತು.

ನಿರ್ಣಯ ಕುರಿತು ಚರ್ಚೆಗೆ ಗೃಹ ಶಾಖೆಯ ಉಪಸಚಿವ ಮೊಹ್ಸಿನ್‌ರವರು ಉತ್ತರವಿತ್ತು, ಪಕ್ಷಾಂತರಿಗಳಿಗೆ ಸಂಬಂಧಿಸಿದಂತೆ ಮಸೂದೆಯೊಂದನ್ನು ಶೀಘ್ರವೇ ಸರ್ಕಾರ ಸಭೆಯ ಮುಂದೆ ತರಲಿದೆ ಎಂದು ತಿಳಿಸಿದರು. ಆದರೆ, ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಸಹಕರಿಸಿ ಕೆಲಸ ಮಾಡಬೇಕೆಂದು ತಿಳಿಸಿದರು.‌

‌ರಾಷ್ಟ್ರೀಯ ಸ್ಮಾರಕಗಳ ರಕ್ಷಣೆಗೆ ವಿಶೇಷ ದಳ: ಸಚಿವ ರಾಯ್ ಭರವಸೆ

ನವದೆಹಲಿ, ಜೂನ್ 21– ಹಿಮಾಚಲ ಪ್ರದೇಶದಲ್ಲಿನ ಚಂಬಾದಿಂದ ಕಳವಾದ ವಿಷ್ಣು ವಿಗ್ರಹವನ್ನು ಭಾರತದಿಂದ ಹೊರಕ್ಕೆ ತೆಗೆದುಕೊಂಡು ಹೋಗಲಾಗಿದೆ ಎಂದು ಸೂಚಿಸಲು ಇದುವರೆಗೆ ಕೈಗೊಂಡ ತನಿಖೆಯಿಂದ ಯಾವುದೇ ರುಜುವಾತೂ ದೊರೆತಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವ ಸಿದ್ಧಾರ್ಥ ಶಂಕರರಾಯ್ ಅವರು ಇಂದು ಲೋಕಸಭೆಯಲ್ಲಿ ತಿಳಿಸಿದರು.

ಕಳ್ಳರು ಮತ್ತು ಅಕ್ರಮ ಸಾಗಾಣಿಕೆ ದಾರರು ಸೂರೆ ಮಾಡದಂತೆ ರಾಷ್ಟ್ರೀಯ ಸ್ಮಾರಕಗಳ ರಕ್ಷಣೆಗಾಗಿ ದಳವೊಂದನ್ನು ಕೇಂದ್ರವು ರಚಿಸುವ ಸಾಧ್ಯತೆಯನ್ನು ಸೂಚ್ಯವಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.