ರಾಷ್ಟ್ರದ ಉಜ್ವಲ ಭವಿಷ್ಯಕ್ಕಾಗಿ ಸರ್ವಶಕ್ತಿ ವಿನಿಯೋಗ
ನವದೆಹಲಿ, ಜ.25– ಕಳೆದುಹೋದ ಘಟನೆಗಳ ಬಗ್ಗೆ ಕೊರಗದೆ, ವಿರುದ್ಧ ಉದ್ದೇಶಗಳಿಗಾಗಿ ವ್ಯರ್ಥ ಕಾಲಹರಣ ಮಾಡದೆ ರಾಷ್ಟ್ರದ ಉಜ್ವಲ ಭವಿಷ್ಯ ನಿರ್ಮಾಣಕ್ಕಾಗಿ ಸರ್ವಶಕ್ತಿಯನ್ನೂ ವಿನಿಯೋಗಿಸಬೇಕೆಂದು ರಾಷ್ಟ್ರಪತಿ ಶ್ರೀ ವಿ.ವಿ. ಗಿರಿ ಅವರು ಇಂದು ದೇಶದ ಜನತೆಗೆ ಮನವಿ ಮಾಡಿಕೊಂಡರು.
‘ನಾವು ಎದುರಿಸುತ್ತಿರುವ ಸಮಸ್ಯೆಗಳು ಅಪಾರ ಕಾಲಹರಣ ಮಾಡುವಂತೆಯೇ ಇಲ್ಲ– ಅಂತೆಯೇ ಸಿದ್ಧ ಪರಿಹಾರಗಳೂ ಸಹ ಇಲ್ಲ’ ಎಂದು ರಾಷ್ಟ್ರಪತಿಗಳು ಗಣರಾಜ್ಯ ದಿನದ ಸಂಬಂಧದಲ್ಲಿ ಪ್ರಸಾರ ಭಾಷಣ ಮಾಡುತ್ತಾ ತಿಳಿಸಿದರು.
ಪಂಜಾಬ್ಗೆ ಚಂಡೀಗಢ: ಪ್ರಧಾನಿಗೆ ವಿರೋಧ ಪಕ್ಷ ನಾಯಕರ ಸಲಹೆ
ನವದೆಹಲಿ, ಜ. 25– ಚಂಡೀಗಢವನ್ನು ಪಂಜಾಬ್ಗೆ ಕೊಡಬೇಕೆಂದೂ ಈ ಬಗ್ಗೆ ಫೆಬ್ರುವರಿ 1ರ ಒಳಗೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಬೇಕೆಂದೂ ಚಂಡೀಗಢ ಪ್ರಶ್ನೆ ಕುರಿತು ಚರ್ಚಿಸಲು, ಪ್ರಧಾನಮಂತ್ರಿ ಶ್ರೀಮತಿ ಇಂದಿರಾಗಾಂಧಿಯವರು ಕರೆದಿದ್ದ ಸಮ್ಮೇಳನದಲ್ಲಿ ಭಾಗವಹಿಸಿದ ವಿರೋಧ ಪಕ್ಷಗಳ ಬಹುತೇಕ ನಾಯಕರು ಅಭಿಪ್ರಾಯ ಪಟ್ಟಿರುವುದಾಗಿ ತಿಳಿದು ಬಂದಿದೆ.
ಅದೃಷ್ಟ ಸಂಖ್ಯೆಯ ಅವತರಣ
ಬೆಂಗಳೂರು,ಜ.25– ಬ್ಯಾಂಕ್ವೆಟ್ ಹಾಲಿನಲ್ಲಿದ್ದ ಸುಮಾರು ಸಾವಿರ ಮಂದಿಗೆ ಉಸಿರು ಕಟ್ಟುತ್ತಿತ್ತು. ಮುಗುಳ್ನಗೆ ಬೀರುತ್ತಿದ್ದ ಮುಖ್ಯಮಂತ್ರಿ ಒಂದೊಂದು ಅಂಕವನ್ನು ಎತ್ತುತ್ತಾ ಹೋದರು.
ಏಳು ಸಾರಿ ಎತ್ತಿದ ನಂತರ 2730382 ಸಂಖ್ಯೆ ಆಗಿ, ರಾಜ್ಯದ ಪ್ರಥಮ ಲಾಟರಿಯ ಪ್ರಥಮ ಶ್ರೇಣಿಯ 2.50 ಲಕ್ಷ ರೂಪಾಯಿ ಪ್ರಥಮ ಬಹುಮಾನ ಪಡೆಯುವ ಪ್ರಥಮ ಸಂಖ್ಯೆಯಾಯಿತು.
ಮೈಸೂರಿಗೆ ‘ಎ‘ ಶ್ರೇಣಿ ಪ್ರಥಮ ಬಹುಮಾನ
ಮೈಸೂರು, ಜ. 25– ‘ನನಗೆ ಲಾಟರಿಯಲ್ಲಿ ಬಹುಮಾನ ಬಂದರೆ ಹಾಗೆ ಮಾಡುತ್ತೇನೆ, ಹೀಗೆ ಮಾಡುತ್ತೇನೆ ಎಂದು ಕನಸು ಕಟ್ಟಿಕೊಂಡವರು ಬಹಳ, ಇವರ ಸಂಖ್ಯೆ ಇತ್ತೀಚೆಗೆ ಸಾಕಷ್ಟು ಬೆಳೆದಿತ್ತು. ಆದರೆ ಮೈಸೂರು ನಾಗರಿಕರಿಗೆ ‘ಎ‘ ಶ್ರೇಣಿಯಲ್ಲಿ ಎರಡೂವರೆ ಲಕ್ಷ ಬಹುಮಾನ ಪಡೆದ ಇಲ್ಲಿನ ಅರಮನೆ ಮೊಕ್ತೇಸರ್ ಶ್ರೀ ಎಸ್. ನಾರಾಯಣ ರಾವ್ ಈ ಗುಂಪಿಗೆ ಸೇರಿದವರಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.