ಕನ್ನಡದ ಹಿತಸಾಧನೆಯೇ ಪರಮ ಧ್ಯೇಯವಾಗಿರಲಿ
ಕನಕಪುರ, ನ. 13– ‘ಕನ್ನಡವೇ ಕನ್ನಡಿಗರ ನನ್ನಿಯ ನುಡಿಯಾಗಬೇಕು. ಕನ್ನಡ ಭಾಷೆ ಮತ್ತು ಸಾಹಿತ್ಯದ ಪುರೋಭಿವೃದ್ಧಿ ಸಾಧನೆಯೇ ಕನ್ನಡಿಗರ ಜಪವಾಗಬೇಕಲ್ಲದೆ ಅದರ ಸಿದ್ಧಿಗಾಗಿ ಶಕ್ಯವಿರುವ ಸರ್ವ ಪ್ರಯತ್ನಗಳೂ ನಿರಂತರವಾಗಿ ನಡೆಯಬೇಕು’ ಎಂದು ಕನ್ನಡದ ಸುಪ್ರಸಿದ್ಧ ಸಾಹಿತಿ ಶ್ರೀ ಸಿ.ಕೆ. ವೆಂಕಟರಾಮಯ್ಯ ಅವರು ಇಂದು ಇಲ್ಲಿ ಅರಂಭವಾದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣ ಮಾಡುತ್ತಾ ಕರೆಯಿತ್ತರು.
‘ಕನ್ನಡನಾಡಿನಲ್ಲಿ ಕನ್ನಡ ತಾಯಿಯೇ ಸಾಮ್ರಾಜ್ಞಿಯಾಗಿ ವೈಭವದಿಂದ ವಿರಾಜಿಸುವಂತಾಗಬೇಕೆಂದು ಕನ್ನಡಿಗರಲ್ಲಿ ಬಹುಮಂದಿಯ ಬಹುಕಾಲದ ಹೊಂಗನಸು. ಆ ಹೊಂಗನಸು ನನಸಾದಂದು ಮಾತ್ರವೇ ಕನ್ನಡಿಗರಿಗೆ ಸಂತೃಪ್ತಿಯ ಸುಧಾಪಾನ. ಕನ್ನಡ ಹಿತಸಾಧನೆಯಿಂದಲೇ ಕನ್ನಡಿಗರಿಗೆ ಧನ್ಯತೆ. ಆದುದರಿಂದ ಕನ್ನಡದ ಹಿತ ಸಾಧನೆಯೇ ಕನ್ನಡಿಗರ ಪರಮ ಧ್ಯೇಯವಾಗಬೇಕು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.