ವಿದೇಶಿ ಒತ್ತಡ, ಭೇದನೀತಿಗಳಿಗೆ ಭಾರತ ಬಗ್ಗದು
ಇಂದೋರ್, ಜ. 7– ಭಾರತಕ್ಕೆ ಕೇಡು ಹಾರೈಸುವ ಹಾಗೂ ಭಾರತ– ಬಾಂಗ್ಲಾ ದೇಶಗಳ ಮಧ್ಯೆ ಭಿನ್ನಾಭಿಪ್ರಾಯ ತರಲು ಅಂತರರಾಷ್ಟ್ರೀಯ ವಲಯಗಳಲ್ಲಿ ನಡೆದಿರುವ ಯತ್ನಗಳನ್ನು ಲೆಕ್ಕಿಸದೆ, ಶಾಂತಿ, ಪ್ರಜಾಸತ್ತೆ ಹಾಗೂ ಜಾತ್ಯತೀತತೆಯ ನೀತಿಗಳನ್ನು ಭಾರತ ಮುಂದುವರಿಸಿಕೊಂಡು ಹೋಗುವುದು ಎಂದು ಪ್ರಧಾನಿ ಇಂದಿರಾ ಗಾಂಧಿ ಇಂದು ಘೋಷಿಸಿದರು.
ನಾವು ಅನುಸರಿಸುತ್ತಿರುವ ನೀತಿಗಳು ಭಾರತ ಉಪಖಂಡಕ್ಕೆ ಮಾತ್ರವಲ್ಲದೆ ಇಡೀ ವಿಶ್ವಕ್ಕೆ ಶಾಂತಿದಾಯಕವೆಂಬ ದೃಢನಂಬಿಕೆ ನಮಗಿರುವುದರಿಂದ ಇತರರ ಹೊಗಳಿಕೆ ತೆಗಳಿಕೆಗಳಿಗೆ ನಾವು ಯಾವಾಗಲೂ ಮಹತ್ವವಿತ್ತಿಲ್ಲ ಎಂದು ಅವರು ನುಡಿದರು.
ಶಾಂತಿ ನೆಲೆಸಲು ಭಾರತದ ಜತೆ ಚರ್ಚೆಗೆ ಸಿದ್ಧ: ಭುಟ್ಟೊ
ನವದೆಹಲಿ, ಜ. 7– ಭಾರತದೊಡನೆ ಶಾಂತಿ ಯಿಂದ ಇರಬಯಸುವ ಪಾಕಿಸ್ತಾನವು ಪರ ಸ್ಪರ ಮಾತುಕತೆಗೂ ಸಿದ್ಧವಾಗಿರುವುದೆಂದು ಅಧ್ಯಕ್ಷ ಭುಟ್ಟೊ ತಿಳಿಸಿರುವುದನ್ನು ಪಾಕ್ ರೇಡಿಯೊ ಇಂದು ಬಿತ್ತರಿಸಿತು.
ಈ ರೀತಿಯ ಚರ್ಚೆಗೂ ಮುಂಚೆ ಭಾರತವು ಯಾವುದೇ ರೀತಿಯ ಬೆದರಿಕೆಗಳನ್ನೂ ಹಾಕಬಾರದೆಂದು ಅವರು ಇಂದು ತಮ್ಮ ಸ್ವಸ್ಥಳವಾದ ಲರ್ಕಾನಾದಲ್ಲಿ ಪೀಪಲ್ಸ್ ಪಾರ್ಟಿ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡುತ್ತಾ ಹೇಳಿದರು.
ತನ್ನ ಮಿಲಿಟರಿ ವಿಜಯದ ನಂತರ ನಾಚಿಕೆ ಗೇಡಿನ ಜೀವನ ನಡೆಸಲು ಪಾಕಿಸ್ತಾನವನ್ನು ಬಲಾತ್ಕರಿಸಿದಲ್ಲಿ ಅದು ಭಾರತದ ತಪ್ಪು ಆಗುವುದೆಂದು ಹೇಳಿದ ಭುಟ್ಟೊ ಅವರು ಪಾಕಿಸ್ತಾನ ಇದಕ್ಕೆ ಸಿದ್ಧವಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.