ಪರೀಕ್ಷಾ ಕ್ರಮವನ್ನೇ ತೆಗೆದುಹಾಕಲು ಮೇಲ್ಮನೆಯಲ್ಲಿ ಒತ್ತಾಯ
ಬೆಂಗಳೂರು, ಜುಲೈ 4– ವಿದ್ಯಾರ್ಥಿಗಳನ್ನು ‘ಬಲಿ ತೆಗೆದುಕೊಂಡು’ ಅವರ ಪಾಲಕರನ್ನು ಕಳವಳಕ್ಕೀಡು ಮಾಡುವ ಪರೀಕ್ಷಾ ಕ್ರಮವನ್ನೇ ತೆಗೆದುಹಾಕಬೇಕು ಎಂದು ಮೇಲ್ಮನೆಯಲ್ಲಿ ಸದಸ್ಯರೊಬ್ಬರು ಪ್ರತಿಪಾದಿಸಿದರು.
ಮುಂಗಡ ಪತ್ರದ ಮೇಲಿನ ತಮ್ಮ ಭಾಷಣವನ್ನು ಮುಂದುವರಿಸಿದ ಸಂಸ್ಥಾ ಕಾಂಗ್ರೆಸಿನ ಶ್ರೀ ಕೆ.ಜತ್ತಪ್ಪ ರೈ, ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆಂದರೆ, ಬೋಧನೆ ಸರಿಯಾಗಿರಲಿಲ್ಲ ಎಂದು ಅರ್ಥವಾಗುತ್ತದೆ ಎಂದು ವಿಶ್ಲೇಷಿಸಿದರು. ಪರೀಕ್ಷಾ ಫಲಿತಾಂಶ ಪ್ರಕಟವಾಗುವ ದಿನ ಪಾಲಕರು ಅತ್ಯಂತ ಕಳವಳದಿಂದ ಇರುತ್ತಾರೆ ಎಂದರು.
ಆಗಸ್ಟ್ 15ರಿಂದ ಜಿಲ್ಲಾ ಮಟ್ಟದಲ್ಲಿ ಆಡಳಿತ ಭಾಷೆ ಆಗಿ ಕನ್ನಡ ಬಳಕೆಗೆ ಆಜ್ಞೆ
ಬೆಂಗಳೂರು, ಜುಲೈ 4– ರಾಜ್ಯ ಸರ್ಕಾರವು ರಾಜ್ಯದ ಜಿಲ್ಲಾ ಮಟ್ಟದ ಸರ್ಕಾರಿ ಕಚೇರಿಗಳಲ್ಲಿ ಈ ವರ್ಷ ಆಗಸ್ಟ್ 15ರಿಂದ ಕನ್ನಡ ಭಾಷೆಯನ್ನೇ ಅಧಿಕೃತ ಭಾಷೆಯಾಗಿ ಉಪಯೋಗಿಸಬೇಕೆಂದು ಮೈಸೂರು ಅಧಿಕೃತ ಭಾಷಾ ಕಾಯಿದೆಯನ್ವಯ
ಆದೇಶ ನೀಡಿದೆ.
ಆದರೆ ಕೇಂದ್ರ ಸರ್ಕಾರಿ ಕಚೇರಿಗಳಿಗೆ, ಅಕೌಂಟೆಂಟ್ ಜನರಲ್ರಿಗೆ, ರಾಜ್ಯದ ಲೆಕ್ಕ ಪತ್ರಗಳ ಇಲಾಖೆ ಹಾಗೂ ಸಂಬಳ ಇತ್ಯಾದಿ ಬಿಲ್ಲುಗಳಿಗೆ ಸಂಬಂಧಿಸಿ ಖಜಾನೆಗಳಿಗೆ ಒಯ್ಯುವ ಪತ್ರ ವ್ಯವಹಾರ ಇಂಗ್ಲಿಷ್ ಭಾಷೆಯಲ್ಲೇ ಮುಂದುವರಿಯುವುದು. ಅಲ್ಲದೆ; ಪರಿಷ್ಕರಣೆ ಆಗಬಹುದಾದ ಯಾವುದೇ ಕಾನೂನಿಗೆ ಸಂಬಂಧಿಸಿದ ಆಜ್ಞೆಗಳಿಗೆ ಹಾಗೂ ಗ್ರಾಮ ಪಂಚಾಯಿತಿ ನ್ಯಾಯಾಲಯಗಳ ಹೊರತು ಇತರ ನ್ಯಾಯಾಲಯಗಳಿಗೆ ಮಾಡುವ ಪತ್ರ ವ್ಯವಹಾರಗಳು ಇಂಗ್ಲಿಷ್ ಭಾಷೆಯಲ್ಲೇ ಮುಂದುವರಿಯುವುವು.
ಎಚ್.ಎಲ್.ಎನ್ ನಿಧನ
ಬೆಂಗಳೂರು ಜುಲೈ 4– ಚಲನಚಿತ್ರ ಮತ್ತು ಕನ್ನಡ ರಂಗಭೂಮಿಯ ಹಿರಿಯ ನಟ–ನಿರ್ದೇಶಕ ಶ್ರೀ ಎಚ್.ಎಲ್.ಎನ್.ಸಿಂಹ ಅವರು ನಿನ್ನೆ ರಾತ್ರಿ 2.20ರಲ್ಲಿ ನಿಧನರಾದರು.
ಸಿಂಹ ಅವರಿಗೆ 68 ವರ್ಷ ವಯಸ್ಸಾಗಿತ್ತು. ಅವರಿಗೆ ಪತ್ನಿ ಮತ್ತು ಒಬ್ಬ ಮಗ ಇದ್ದಾರೆ. ಕೆಲವು ದಿನಗಳಿಂದ ಅವರು ಅನಾರೋಗ್ಯದಿಂದ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.