ADVERTISEMENT

25 ವರ್ಷಗಳ ಹಿಂದೆ: ಶುಕ್ರವಾರ, 23.2.1996

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2021, 19:17 IST
Last Updated 22 ಫೆಬ್ರುವರಿ 2021, 19:17 IST
   

ತಾರತಮ್ಯ ನಿಲ್ಲಿಸಿ: ಸಿಬಿಐಗೆ ನ್ಯಾಯಾಧೀಶರ ಎಚ್ಚರಿಕೆ

ನವದೆಹಲಿ, ಫೆ. 22 (ಯುಎನ್‌ಐ)– ಹವಾಲ ಪ್ರಕರಣದ ತನಿಖೆಯ ಪ್ರಗತಿ ಪರಿಶೀಲನೆ ನಡೆಸಿರುವ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ವಿ.ಬಿ.ಗುಪ್ತಾ ಅವರು ಇಂದು ಸಿಬಿಐ ಅಧಿಕಾರಿಗಳಿಗೆ, ‘ಕ್ರಮ ಕೈಗೊಳ್ಳುವುದರಲ್ಲಿ ದ್ವಿಮುಖ ನೀತಿ ಅನುಸರಿಸಬೇಡಿ’ ಎಂದು ಎಚ್ಚರಿಕೆ ನೀಡಿದ್ದಾರೆ.

‘ಹವಾಲ ಹಣ ನೀಡಿದ ಆರೋಪಿ ಜೈನ್‌ನನ್ನು ಬಂಧಿಸಲಾಗಿದೆ. ಆದರೆ ಹಣ ಪಡೆದ ಆರೋಪಿ, ನೈವೇಲಿ ಲಿಗ್ನೈಟ್‌ ನಿಗಮದ ಚೇರ್‌ಮನ್‌ ಎಂ.ಪಿ.ನಾರಾಯಣನ್‌ರನ್ನು ಯಾಕೆ ಬಂಧಿಸಿಲ್ಲ?’ ಎಂದು ಸಿಬಿಐ ಅಧಿಕಾರಿ
ಗಳನ್ನು ಪ್ರಶ್ನಿಸಿದ ನ್ಯಾಯಾಧೀಶರು, ‘ಸಿಬಿಐ ತಾರತಮ್ಯ ನಡೆಸುತ್ತಿರುವುದು ಇದೇ ಮೊದಲಲ್ಲ’ ಎಂದೂ ಗುಡುಗಿದರು.

ADVERTISEMENT

‘ಕಾನೂನು ಎಲ್ಲರಿಗೂ ಒಂದೇ ರೀತಿ ಅನ್ವಯವಾಗಬೇಕು. ಕೆಲವು ಆರೋಪಿಗಳಿಗೆ ಪಕ್ಷಪಾತ ತೋರಿಸುವ ಮೂಲಕ ಕಾನೂನಿಗಿಂತ ಸಿಬಿಐ ದೊಡ್ಡದು ಎಂದು ಬಿಂಬಿಸಲಾಗದು’ ಎಂದು ನಾರಾಯಣನ್‌ ಸಲ್ಲಿಸಿದ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಧೀಶರು ಹೇಳಿದರು.

ಹವಾಲ: ಷರೀಫ್‌ ಸೇರಿ 14 ಜನರ ವಿರುದ್ಧ ಸಿಬಿಐ ಆರೋಪ

ನವದೆಹಲಿ, ಫೆ. 22 (ಪಿಟಿಐ, ಯುಎನ್‌ಐ)– ಹವಾಲ ಹಗರಣದಲ್ಲಿ ಕಳಂಕಿತರಾಗಿರುವ ಬೂಟಾ ಸಿಂಗ್‌,
ಆರ್.ಕೆ.ಧವನ್‌, ಕಮಲನಾಥ್‌, ಅರವಿಂದ ನೇತಂ, ಜಾಫರ್‌ ಷರೀಫ್‌, ಎನ್‌.ಡಿ.ತಿವಾರಿ, ಶರದ್‌ ಯಾದವ್‌ ಸೇರಿ 14 ಮಂದಿ ಉನ್ನತ ರಾಜಕಾರಣಿಗಳ ವಿರುದ್ಧ ಸಿಬಿಐ ಇಂದು ಮತ್ತೆ ಆರೋಪಪಟ್ಟಿ ಸಲ್ಲಿಸಿದೆ. ದೆಹಲಿ ಮುಖ್ಯಮಂತ್ರಿ ಮದನ್‌ಲಾಲ್‌ ಖುರಾನಾ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅನುಮತಿ ಕೋರಿದ ಬೆನ್ನಲ್ಲೇ ಅವರು ರಾಜೀನಾಮೆ ಸಲ್ಲಿಸಿದರು.

65 ಕೋಟಿ ರೂ. ಹವಾಲ ಹಗರಣದಲ್ಲಿ ಇದುವರೆಗೆ 62 ರಾಜಕಾರಣಿಗಳ ಸಹಿತ 159 ವ್ಯಕ್ತಿಗಳು ಆರೋಪಿಗಳಾಗಿರುವು
ದಾಗಿ ಸಾಲಿಸಿಟರ್‌ ಜನರಲ್‌ ದೀಪಂಕರ್‌ ಪಿ. ಗುಪ್ತಾ ಅವರು ಇಂದು ಸುಪ್ರೀಂ ಕೋರ್ಟಿಗೆ ತಿಳಿಸಿದರು. ಈ ಪೈಕಿ ಆರು ಮಂದಿ ದಿವಂಗತರು. 8 ಜನರನ್ನು ಇನ್ನೂ ಗುರುತು ಹಚ್ಚಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.