30 ಸಚಿವರ ಪೂರ್ಣ ಪ್ರಮಾಣ ಸಂಪುಟಕ್ಕೆ ಸಿದ್ಧತೆ
ಬೆಂಗಳೂರು, ಡಿ. 14– ರಾಜ್ಯದ ಎಲ್ಲ ಜಿಲ್ಲೆ ಹಾಗೂ ವರ್ಗಗಳನ್ನು ಪ್ರತಿನಿಧಿಸುವ ರೀತಿಯಲ್ಲಿ ಜನತಾದಳ ಸರ್ಕಾರದ ನೂತನ ಮಂತ್ರಿಮಂಡಲವನ್ನು ಶುಕ್ರವಾರ ಪೂರ್ಣ ಪ್ರಮಾಣಕ್ಕೆ ವಿಸ್ತರಿಸಲಾಗುತ್ತದೆ.
ಒಂದೇ ಬಾರಿಗೆ ಪೂರ್ಣ ಪ್ರಮಾಣದಲ್ಲಿ ರಚನೆಯಾಗಲಿರುವ 30 ಮಂದಿಯ (ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸೇರಿ) ಮಂತ್ರಿಮಂಡಲದ ಪಟ್ಟಿಯನ್ನು ಸಿದ್ಧಪಡಿಸುವ ಪ್ರಕ್ರಿಯೆ ಈಗಾಗಲೇ ಪ್ರಾರಂಭಗೊಂಡಿದೆ. ಪ್ರಮಾಣ ವಚನ ಸ್ವೀಕಾರ ಅಂದು ನಾಲ್ಕು ಗಂಟೆಗೆ ನಡೆಯಲಿದೆ.
ಸಕ್ಕರೆ ಹಗರಣದ ಆರೋಪ: ಸಚಿವ ಆಂಟನಿ ರಾಜೀನಾಮೆ
ನವದೆಹಲಿ, ಡಿ. 14 (ಪಿಟಿಐ, ಯುಎನ್ಐ)– ಕೋಟ್ಯಂತರ ರೂಪಾಯಿ ಮೊತ್ತದ ಸಕ್ಕರೆ ಆಮದು ಹಗರಣ ತನಿಖೆ ನಡೆಸಿದ ಗ್ಯಾನ್ ಪ್ರಕಾಶ್ ಸಮಿತಿ ತಮ್ಮ ಮೇಲೆ ‘ಕೆಲ ಪ್ರತಿಕೂಲ ಟೀಕೆಗಳನ್ನು’ ಮಾಡಿರುವ ಹಿನ್ನೆಲೆಯಲ್ಲಿ ಕೇಂದ್ರ ನಾಗರಿಕ ಪೂರೈಕೆ ಸಚಿವ ಎ.ಕೆ. ಆಂಟನಿ ಅವರು ಇಂದು ರಾಜೀನಾಮೆ ನೀಡಿದರು.
‘ನನಗೆ ಪ್ರಮಾಣಿಕತೆ, ನಿಷ್ಠೆ ಮತ್ತು ಆತ್ಮಸಾಕ್ಷಿ ಎಲ್ಲಕ್ಕಿಂತ ಹೆಚ್ಚಿನದು’ ಎಂದು ಸಂಜೆ ಪತ್ರಿಕಾಗೋಷ್ಠಿಯಲ್ಲಿ ತಮ್ಮ ರಾಜೀನಾಮೆ ನಿರ್ಧಾರ ಪ್ರಕಟಿಸುತ್ತ ಆಂಟನಿ ಭಾವುಕರಾಗಿ ನುಡಿದರು. ಇಂಥ ತೀವ್ರ ಸ್ವರೂಪದ ಕ್ರಮ ಕೈಗೊಳ್ಳುವ ಮುನ್ನ ತಾವು ಪ್ರಧಾನಿ ನರಸಿಂಹರಾವ್ ಜತೆ ಸಮಾಲೋಚಿಸಿಲ್ಲ ಎಂದ ಅವರು, ರಾಜೀನಾಮೆ ನಿರ್ಧಾರ ಅಚಲ ಎಂದು ಸ್ಪಷ್ಟಪಡಿಸಿದರು.
ದೇವದಾಸಿ: ಬಳೆ ಒಡೆವ ಬದಲು ತೊಡುವ ದೀಕ್ಷೆ
ಬೆಳಗಾವಿ, ಡಿ. 14– ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ಇದೇ ಹೊಸ್ತಿಲ ಹುಣ್ಣಿಮೆ ಹಿಂದಿನ ದಿನ (ರಂಡಿ ಹುಣ್ಣಿಮೆ) ದೇವದಾಸಿಯರು ಬಳೆ ಒಡೆದುಕೊಳ್ಳುವ ಪದ್ಧತಿ ಬದಲಿಸಿ ಅಂದು ಬಳೆ ಹಾಕಿಕೊಳ್ಳುವ ಹೊಸ ಪರಿವರ್ತನೆಯನ್ನು ತರಲು ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ನಿಗಮ ಹಾಕಿಕೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.