ADVERTISEMENT

ಮಂಗಳವಾರ, 19–8–1969

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2019, 20:01 IST
Last Updated 18 ಆಗಸ್ಟ್ 2019, 20:01 IST
   

‘ಅಶಿಸ್ತಿನ ವರ್ತನೆ’ ಬಗ್ಗೆ ಇಂದಿರಾಗೆ ಎಸ್ಸೆನ್ ‘ಷೋಕಾಸ್ ನೋಟಿಸ್’

ನವದೆಹಲಿ, ಆ. 18– ರಾಷ್ಟ್ರಪತಿ ಚುನಾವಣೆಯಲ್ಲಿ ಅಧಿಕೃತ ಅಭ್ಯರ್ಥಿಗೆ ವಿರೋಧ ವ್ಯಕ್ತಪಡಿಸಿದ ಬಗ್ಗೆ ವಿವರಣೆ ನೀಡಬೇಕೆಂದು ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರನ್ನು, ಅವರ ಇಬ್ಬರು ಹಿರಿಯ ಸಹೋದ್ಯೋಗಿ ಗಳಾದ ಶ್ರೀ ಫಕ್ರುದ್ದೀನ್ ಆಲಿ ಅಹ್ಮದ್ ಹಾಗೂ ಶ್ರೀ ಜಗಜೀವನರಾಮ್ ಅವರನ್ನು ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪನವರು ಕೇಳಿರುವುದರಿಂದ ಕಾಂಗ್ರೆಸ್ಸಿನಲ್ಲಿನ ಬಿಕ್ಕಟ್ಟು ಇಂದು ರಾತ್ರಿ ಮತ್ತಷ್ಟು ಉಲ್ಬಣಿಸಿತು.

ಶ್ರೀ ನಿಜಲಿಂಗಪ್ಪನವರು ಇಂದು ರಾತ್ರಿ ಈ ಮೂವರು ನಾಯಕರಿಗೂ ಪ್ರತ್ಯೇಕ ಪ್ರತ್ಯೇಕವಾಗಿ ಪತ್ರಗಳನ್ನು ಬರೆದಿದ್ದಾರೆ.

ADVERTISEMENT

ಅನಿರ್ಬಂಧಿತ ಮತದಾನ ಮಾಡಲು ಸದಸ್ಯರಿಗೆ ಪ್ರೋತ್ಸಾಹ ನೀಡುವುದರ ಮೂಲಕ ಈ ಮೂವರೂ ‘ತೀವ್ರ ಆಶಿಸ್ತಿನ ವರ್ತನೆ’ ತೋರಿರುವರೆಂದೂ, ಅದರಿಂದ ಪಕ್ಷದ ಹಿತಾಸಕ್ತಿಗಳಿಗೆ ಹಾನಿಯುಂಟು ಮಾಡಿರುವರೆಂದು ಈ ಪತ್ರಗಳಲ್ಲಿ ಕಾಂಗ್ರೆಸ್ ಅಧ್ಯಕ್ಷರು ತಿಳಿಸಿರುವುದಾಗಿ ಗೊತ್ತಾಗಿದೆ.

ಮುಖ್ಯಮಂತ್ರಿ ಗೈರುಹಾಜರಿ: ಕೇರಳದಲ್ಲಿ ಸಂವಿಧಾನ ಬಿಕ್ಕಟ್ಟು?

ತಿರುವನಂತಪುರ, ಆ. 18– ಚಿಕಿತ್ಸೆಗಾಗಿ ಬರ್ಲಿನಿಗೆ ತೆರಳಿರುವ ಮುಖ್ಯಮಂತ್ರಿ ಶ್ರೀ ಇ.ಎಂ.ಎಸ್. ನಂಬೂದಿರಿಪಾಡರ ಗೈರುಹಾಜರಿಯಿಂದ ಕೇರಳದಲ್ಲಿ ಸಂವಿಧಾನ ಬಿಕ್ಕಟ್ಟು ಉದ್ಭವಿಸಿಲ್ಲವೆಂದು ವಿಧಾನ ಸಭಾಧ್ಯಕ್ಷ ಶ್ರೀ ದಾಮೋದರನ್ ಪೊಟ್ಟ ಅವರು ಇಂದು ವಿಧಾನ ಸಭೆಯಲ್ಲಿ ತೀರ್ಮಾನವಿತ್ತರು.

‘ಮುಖ್ಯಮಂತ್ರಿಗಳಿಲ್ಲದ’ ರಾಜ್ಯದ ಪರಿಸ್ಥಿತಿ ಸಂವಿಧಾನದಲ್ಲಿ ಹೇಗಿರುವುದೆಂಬುದನ್ನು ವಿವರಿಸಲು ಸಭೆಯನ್ನು ಮುಂದೂಡಿ ಅಡ್ವೊಕೇಟ್ ಜನರಲ್ ಅವರನ್ನು ಕರೆಸಬೇಕೆಂಬ ಒತ್ತಾಯವನ್ನು ಅವರು ತಿರಸ್ಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.