ರಾಷ್ಟ್ರಗೌರವದೊಡನೆ ರಾಧಾಕೃಷ್ಣನ್ ಅಂತ್ಯಕ್ರಿಯೆ
ಮದರಾಸ್, ಏ. 17– ಬುಧವಾರ ಮಧ್ಯರಾತ್ರಿ ಇಲ್ಲಿ ನಿಧನರಾದ ಮಾಜಿ ರಾಷ್ಟ್ರಪತಿ ಎಸ್. ರಾಧಾಕೃಷ್ಣನ್ ಅವರ ಅಂತ್ಯಕ್ರಿಯೆ ಇಂದು ಸಂಜೆ ಮೈಲಾಪುರ ರುದ್ರಭೂಮಿಯಲ್ಲಿ ಪೂರ್ಣ ಸರ್ಕಾರಿ ಗೌರವದೊಡನೆ ನಡೆಯಿತು.
ರಾಧಾಕೃಷ್ಣನ್ ಅವರ ಪುತ್ರ ಎಸ್. ಗೋಪಾಲ್ ಅವರು ಚಿತೆಗೆ ಸಂಜೆ 5.10ರಲ್ಲಿ ಅಗ್ನಿಸ್ಪರ್ಶ ಮಾಡಿದರು.
ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಮತ್ತು ಪ್ರಧಾನಿ ಇಂದಿರಾ ಗಾಂಧಿ ಪರವಾಗಿ ಅವರ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛ ಅರ್ಪಿಸಿ ಗೌರವ ಸಲ್ಲಿಸಲಾಯಿತು. ಕೇಂದ್ರ ಸರ್ಕಾರದ ಪರವಾಗಿ, ಸಚಿವರಾದ ಸಿ. ಸುಬ್ರಹ್ಮಣ್ಯಂ, ಉಮಾಶಂಕರ ದೀಕ್ಷಿತ್ ಪಾಲ್ಗೊಂಡಿದ್ದರು.
1975–76ರಲ್ಲಿ ಭಾರತದ ಸಾಲ ಬಾಕಿ ಏರಿಕೆ
ನವದೆಹಲಿ, ಏ. 17– ಭಾರತದ ಸಾಲ ಮರುಪಾವತಿ ಬಾಕಿ 1975–76ನೇ ಸಾಲಿನಲ್ಲಿ 1975ರ ಮಾರ್ಚ್ 31ರಂದು ಇದ್ದುದಕ್ಕಿಂತ ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ ಎಂದು ವಿಶ್ವಬ್ಯಾಂಕ್ ಅಂದಾಜು ಮಾಡಿದೆ.
ಅಲ್ಲದೆ, ಭಾರತಕ್ಕೆ 150 ಕೋಟಿ ಡಾಲರಿಗೆ ಕಡಿಮೆ ಇಲ್ಲದಂತೆ ಹೊಸ ಸಾಲ ನೀಡುವ ಒಪ್ಪಂದ ಮಾಡಿಕೊಳ್ಳಲು ನೆರವು ನೀಡುವ ರಾಷ್ಟ್ರಗಳಿಗೆ ಶಿಫಾರಸು ಮಾಡಲಿದೆ.
ಭಾರತಕ್ಕೆ ನೆರವು ನೀಡುವ ರಾಷ್ಟ್ರಗಳು ಜೂನ್ 25 ಮತ್ತು 26ರಂದು ಪ್ಯಾರಿಸ್ನಲ್ಲಿ ಸಭೆ ಸೇರಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.