ADVERTISEMENT

25 ವರ್ಷಗಳ ಹಿಂದೆ | ಶನಿವಾರ, 5–8–1995

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2020, 19:30 IST
Last Updated 4 ಆಗಸ್ಟ್ 2020, 19:30 IST
ದಿವಂಗತ ಮಾಜಿ ಪ್ರಧಾನಿ ಪಿ.ವಿ ನರಸಿಂಹರಾವ್‌
ದಿವಂಗತ ಮಾಜಿ ಪ್ರಧಾನಿ ಪಿ.ವಿ ನರಸಿಂಹರಾವ್‌    

ಎನ್ರಾನ್‌ ಒಪ್ಪಂದ ‘ಮರು ಸಂಧಾನ’– ರಾವ್‌ ವಿಶ್ವಾಸ

ಕ್ವಾಲಾಲಂಪುರ, ಆ. 4 (ಪಿಟಿಐ, ಯುಎನ್‌ಐ)– ಮಹಾರಾಷ್ಟ್ರ ಸರ್ಕಾರ ನಿನ್ನೆ ರದ್ದುಗೊಳಿಸಿರುವ ಎನ್ರಾನ್‌ ವಿದ್ಯುತ್‌ ಯೋಜನೆ ಒಪ್ಪಂದದ ಬಗ್ಗೆ ಮರು ಸಮಾಲೋಚನೆ ನಡೆದು ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದು ಪ್ರಧಾನಿ ಪಿ.ವಿ ನರಸಿಂಹರಾವ್‌ ಇಂದು ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರು ಉತ್ತರಿಸಿ, ಒಪ್ಪಂದ ಮರು ಪರಿಶೀಲನೆಗೆ ರಾಜ್ಯ ಸರ್ಕಾರಕ್ಕೆ ಪೂರ್ಣ ಅಧಿಕಾರವಿದೆ ಎಂಬ ಅಂಶ ಒಪ್ಪಿಕೊಂಡರು. ಆದರೆ, ಇಂಥ ಒಪ್ಪಂದವನ್ನು ಒಂದು ಕಡೆಯವರು ರದ್ದುಪಡಿಸಿದಾಗ ಮರು ಸಂಧಾನಕ್ಕೆ ಅವಕಾಶವಿದೆ ಎಂದು ಹೇಳಿದರು.

ADVERTISEMENT

ಹಿಂದೆ ತಾರಾಪುರ ಪರಮಾಣು ವಿದ್ಯುತ್‌ ಘಟಕಕ್ಕೆ ಯುರೇನಿಯಂ ಪೂರೈಸಲು ಒಪ್ಪಿದ್ದ ಅಮೆರಿಕ ನಂತರ ಅದನ್ನು ಮಧ್ಯದಲ್ಲಿಯೇ ಸ್ಥಗಿತಗೊಳಿಸಿದ್ದನ್ನು ನೆನಪಿಸಿದ ರಾವ್‌, ನಂತರ ಚರ್ಚೆ ಮೂಲಕ ಅಮೆರಿಕವೇ ಪ್ರಯತ್ನಿಸಿ ಬೇರೊಂದು ಪರಿಹಾರ ಹುಡುಕಿದ್ದನ್ನು ನೆನಪಿಸಿದರು.

ವಿಷ್ಣುವರ್ಧನ್‌, ಶ್ರುತಿ, ಬಾಬು, ಹಂಸಲೇಖಗೆ ಫಿಲಂಫೇರ್‌ ಪ್ರಶಸ್ತಿ

ಮದ್ರಾಸ್‌, ಆ. 4 (ಯುಎನ್‌ಐ)– ಅತ್ಯುತ್ತಮ ಅಭಿನಯಕ್ಕಾಗಿ ಕನ್ನಡದಲ್ಲಿ ವಿಷ್ಣುವರ್ಧನ್‌ ಮತ್ತು ಶ್ರುತಿ ಅವರಿಗೆ 1994ನೇ ಸಾಲಿನ ಫೀಲಂಫೇರ್‌ ಪ್ರಶಸ್ತಿ ನೀಡಲಾಗಿದೆ.

‘ಹಾಲುಂಡ ತವರು’ ಚಿತ್ರಕ್ಕಾಗಿ ವಿಷ್ಣು ಅವರಿಗೆ ಶ್ರೇಷ್ಠ ನಟ ಮತ್ತು ‘ಹೆತ್ತ ಕರುಳು’ ಚಿತ್ರಕ್ಕಾಗಿ ಶ್ರುತಿ ಅವರಿಗೆ ಶ್ರೇಷ್ಠ ನಟಿ ‍ಪ್ರಶಸ್ತಿ ದೊರೆತಿದೆ. ‘ಕರುಳಿನ ಕೂಗು’ ಶ್ರೇಷ್ಠ ಚಿತ್ರ ಪ್ರಶಸ್ತಿ ಪಡೆದಿದೆ.

ರಾಜೇಂದ್ರ ಸಿಂಗ್‌ ಬಾಬು ಶ್ರೇಷ್ಠ ನಿರ್ದೇಶಕ (ಮಹಾಕ್ಷತ್ರಿಯ), ಹಂಸಲೇಖ ಅವರು (ಹಾಲುಂಡ ತವರು) ಮೂರನೇ ಸಲ ಶ್ರೇಷ್ಠ ಸಂಗೀತ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ ಎಂದು ಬೆನೆಟ್‌ ಕೋಲ್ಮನ್‌ ಸಂಸ್ಥೆ ಪ್ರಕಟಣೆ ತಿಳಿಸಿದೆ. ಸೆ. 23ರಂದು ಇಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.