ಕೇರಳಕ್ಕೆ ಆಡಳಿತ ಕಾಂಗ್ರೆಸ್ ನೇತೃತ್ವದ ಸರ್ಕಾರ
ತಿರುವನಂತಪುರ, ಸೆ. 18– ಆಡಳಿತ ಕಾಂಗ್ರೆಸ್– ಸಿ.ಪಿ.ಐ– ಮುಸ್ಲಿಂ ಲೀಗ್ ಒಕ್ಕೂಟದ ಸರ್ಕಾರ ಇನ್ನು ಮುಂದೆ ಕೇರಳವನ್ನು ಆಳುವುದು ಹೆಚ್ಚು ಕಮ್ಮಿ ಖಚಿತವೆಂದು ಮಧ್ಯಂತರ ಚುನಾವಣೆಯ ಫಲಿತಾಂಶ ಸ್ಪಷ್ಟಪಡಿಸಿದೆ.
ಮಧ್ಯಂತರ ಚುನಾವಣೆಯಲ್ಲಿ ವಿಜಯದ ಹಾದಿಯಲ್ಲಿ ಮುನ್ನಡೆಯುತ್ತಿರುವ ಆಡಳಿತ ಕಾಂಗ್ರೆಸ್–ಸಿ.ಪಿ.ಐ. ರಂಗವು ರಾಜ್ಯ ವಿಧಾನಸಭೆಯಲ್ಲಿ ಅತ್ಯಂತ ಭಾರಿ ಒಕ್ಕೂಟವಾಗಿ ಹೊರ ಹೊಮ್ಮುವುದು ಖಚಿತ ಎಂಬಂತೆ ಕಂಡುಬಂದಿದೆ.
ಕೇರಳ ಕಾಂಗ್ರೆಸ್ ಜೊತೆ ಮೈತ್ರಿ ರಚಿಸಿಕೊಂಡು 39 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಸಂಸ್ಥಾ ಕಾಂಗ್ರೆಸ್ ಪಕ್ಷವು ಒಂದು ಸ್ಥಾನವನ್ನೂ ಗಳಿಸಲಿಲ್ಲ.
ಸಾಹಿತ್ಯ ಪರಿಷತ್ ಸುವರ್ಣ ಮಹೋತ್ಸವ ಆಚರಣೆಗೆ ಅದ್ಧೂರಿಯ ಸಿದ್ಧತೆ
ಬೆಂಗಳೂರು, ಸೆ. 18– ಕನ್ನಡ ನಾಡು, ನುಡಿಯ ಶ್ರೇಯೋಭಿವೃದ್ಧಿಯ ಸಂಕೇತವಾಗಿ ಬೆಳೆದು ಬಂದಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸುವರ್ಣ ಮಹೋತ್ಸವ ಮತ್ತು 47ನೇ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿಯ ಸಿದ್ಧತೆ ಹಾಗೂ ವ್ಯಾಪಕ ಸಂಘಟನಾ ಕಾರ್ಯಕ್ರಮಗಳು ಆರಂಭವಾಗಿವೆ.
ಡಿಸೆಂಬರ್ 25ರಿಂದ 29ರವರೆಗೆ ಈ ಕಾರ್ಯಕ್ರಮಗಳು ನಡೆಯುವುವು. 1915ರಲ್ಲಿ ಪರಿಷತ್ತು ಸ್ಥಾಪನೆಯಾಗಿ, ನಂತರದ ಎರಡು ವರ್ಷಗಳನ್ನು ಬಿಟ್ಟರೆ, ಸಮ್ಮೇಳನವು ಬೆಂಗಳೂರಿನಲ್ಲಿ ನಡೆಯುತ್ತಿರುವುದು ಇದೇ ಪ್ರಥಮ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.