ADVERTISEMENT

25 ವರ್ಷಗಳ ಹಿಂದೆ| ಹುದ್ದೆಗಳು ಹರಾಜಿಗೆ: ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 16 ಜೂನ್ 2020, 1:35 IST
Last Updated 16 ಜೂನ್ 2020, 1:35 IST

ಶುಕ್ರವಾರ 16-6-1995

ಬೆಂಗಳೂರು, ಜೂನ್ 15– ‘ಸ್ವಚ್ಛ–ದಕ್ಷ ಆಡಳಿತ ನೀಡುವುದಾಗಿ ವಚನ ಕೊಟ್ಟು ಅಧಿಕಾರಕ್ಕೆ ಬಂದ ಜನತಾ ದಳದ ಆಡಳಿತದಲ್ಲಿ ಆಯಕಟ್ಟಿನ ಸ್ಥಾನಗಳು ಹರಾಜು ಆಗುತ್ತಿವೆ. ಅಪರಾಧಿಗಳಿಗೆ ರಾಜಾಶ್ರಯ ಸಿಗುತ್ತಿದೆ. ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತವಾಗಿವೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಇಂದು ಇಲ್ಲಿ ಆರೋಪಿಸಿದರು.

’ವರ್ಗಾವಣೆ ದಂಧೆ ಜೂನ್ ಅಂತ್ಯಕ್ಕೂ ಮುಗಿಯುವಂತಿಲ್ಲ. ಹೆಚ್ಚು ಹಣ ಕೊಟ್ಟವರಿಗೆ ಪ್ರಮುಖ ಸ್ಥಾನಗಳು ಎಂಬಂತಾಗಿದೆ. ಸಚಿವರು ತಮ್ಮ ಸಂಬಂಧಿಕರು, ಜಾತಿ ಬಾಂಧವರನ್ನು ಬೇಕಾದ ಕಡೆ ಹಾಕಿಕೊಂಡಿದ್ದಾರೆ. ಮಂತ್ರಿಗಳ ಮನೆಯವರು–ಮಕ್ಕಳು ವರ್ಗಾವಣೆ ಪಟ್ಟಿ ತಯಾರಿಸುವ ಮಟ್ಟಿಗೆ ಹೋಗಿದೆ ಇದು’ ಎಂದು ಪತ್ರಿಕಾ
ಗೋಷ್ಠಿಯಲ್ಲಿ ಅವರು ಕೆಂಡ ಕಾರಿದರು.

ADVERTISEMENT

ನೋಟು ಮುದ್ರಣ ಪೂರ್ಣ ಸ್ಥಗಿತ

ನಾಸಿಕ್, ಜೂನ್ 15 (ಯುಎನ್ಐ)– ಇಲ್ಲಿಗೆ ಸಮೀಪದ ಸರ್ಕಾರಿ ನೋಟುಗಳ ಮುದ್ರಣ ಕಾರ್ಖಾನೆಯಲ್ಲಿ ಕಾಗದದ ದಾಸ್ತಾನು ಮುಗಿದ ಕಾರಣ ನಿನ್ನೆಯಿಂದ ಎಲ್ಲ ಮೌಲ್ಯದ ನೋಟುಗಳ ಮುದ್ರಣ ಸಂಪೂರ್ಣ ಸ್ಥಗಿತಗೊಂಡಿದೆ.

ಕಳೆದ ಕೆಲವು ವಾರಗಳಿಂದ ಸಮರ್ಪಕ ಗುಣಮಟ್ಟದ ವಿಶೇಷ ಕಾಗದದ ಕೊರತೆಯಿಂದ ಮುದ್ರಣಾಲಯದ ಕೆಲಸ ಕಾರ್ಯಗಳಿಗೆ ತೀವ್ರ ತೊಂದರೆಯಾಗಿತ್ತು. ಕಾಗದ ಮತ್ತು ಮಸಿ ಅಭಾವದಿಂದಾಗಿ ಬಹುತೇಕ ಮುದ್ರಣ, ಜೋಡಣೆ ಮತ್ತು ಕತ್ತರಿಸುವ ಯಂತ್ರಗಳನ್ನು ಜೂನ್ 12ರಿಂದಲೇ ನಿಲ್ಲಿಸಲಾಗಿತ್ತು. ಈ ಅವಧಿಯಲ್ಲಿ ವಿವಿಧ ಮೌಲ್ಯದ ಸುಮಾರು 5 ಸಾವಿರ ಕೋಟಿ ನೋಟುಗಳ ಮುದ್ರಣ ನಿಂತಿದ್ದು, ಮೂರು ಸಾವಿರ ಸಿಬ್ಬಂದಿಗೆ ಕೆಲಸ ಇಲ್ಲದಂತಾಗಿದೆ ಎಂದು ಮುದ್ರಣಾಲಯದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.