* ಕಾಶ್ಮೀರ: ಭಾರತದ ನಿಲುವಿಗೆ ಮಂಡೆಲಾ ಬೆಂಬಲ
ನವದೆಹಲಿ, ಜ. 27 (ಪಿಟಿಐ, ಯುಎನ್ಐ)– ಕಾಶ್ಮೀರ ಸಮಸ್ಯೆಯನ್ನು ಭಾರತ ಮತ್ತು ಪಾಕಿಸ್ತಾನಗಳು ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎನ್ನುವ ಮೂಲಕ ದಕ್ಷಿಣ ಆಫ್ರಿಕದ ಅಧ್ಯಕ್ಷ ನೆಲ್ಸನ್ ಮಂಡೆಲಾ ಅವರು ಇಂದು ಭಾರತದ ನಿಲುವನ್ನು ಸಂಪೂರ್ಣವಾಗಿ ಬೆಂಬಲಿಸಿದ್ದಾರೆ.
ಇದರ ಜತೆಗೆ ಭಯೋತ್ಪಾದಕ ಚಟುವಟಿಕೆ ಹಾಗೂ ಮಾದಕ ವಸ್ತುಗಳ ಕಳ್ಳಸಾಗಣೆ ತಡೆಯುವುದು, ವಿಜ್ಞಾನ, ತಂತ್ರಜ್ಞಾನ, ಪ್ರವಾಸೋದ್ಯಮ ಅಭಿವೃದ್ಧಿ ಸೇರಿದಂತೆ ಪರಸ್ಪರ ಸಹಕಾರ ನೀಡುವ ಮೂರು ಒಪ್ಪಂದಗಳಿಗೆ ಭಾರತ ಮತ್ತು ದಕ್ಷಿಣ ಆಫ್ರಿಕ ಸಹಿ ಮಾಡಲು ಇಂದು ಒಪ್ಪಿಕೊಂಡವು.
* ಅಕ್ರಮ ಸಾಗುವಳಿ ಸಕ್ರಮಕ್ಕೆ ಶಾಸಕರ ಬದಲು ಅಧಿಕಾರಿಗಳ ನೇತೃತ್ವದ ಸಮಿತಿ
ಬೆಂಗಳೂರು, ಜ. 27– ಅಕ್ರಮ ಸಾಗುವಳಿ ಸಕ್ರಮಗೊಳಿಸಲು ಇರುವ ಶಾಸಕರ ನೇತೃತ್ವದ ಸಮಿತಿಗಳನ್ನು ರದ್ದುಗೊಳಿಸಿ ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪುನರುಚ್ಚರಿಸುವ ಆಲೋಚನೆಯಿದೆ ಎಂದು ಕಂದಾಯ ಸಚಿವ ಆರ್.ಎಲ್. ಜಾಲಪ್ಪ ಅವರು ಇಂದು ಇಲ್ಲಿ ನುಡಿದರು.
‘ಈ ಸಮಿತಿಯಲ್ಲಿ ನಾಲ್ವರು ಅಧಿಕಾರೇತರ ಸದಸ್ಯರಿರುತ್ತಾರೆ. ಇವರಲ್ಲಿ ಪರಿಶಿಷ್ಟರು, ಹಿಂದುಳಿದವರು, ಮಹಿಳೆ ಹಾಗೂ ಸಾಮಾನ್ಯ ವರ್ಗದ ಒಬ್ಬೊಬ್ಬ ಸದಸ್ಯರಿರುತ್ತಾರೆ’ ಎಂದು ಅವರು ಪತ್ರಕರ್ತರಿಗೆ ತಿಳಿಸಿದರು. ಈಗಿರುವ ಶಾಸಕರ ನೇತೃತ್ವದ ಸಮಿತಿಗಳ ನಿರ್ವಹಣೆ ಬಗೆಗೆ ದೂರುಗಳಿರುವುದನ್ನು ಅವರು ಒಪ್ಪಿಕೊಂಡರು.
* ರಾಜೀವ್ ಹತ್ಯೆ: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ನಿರ್ಧಾರ
ನವದೆಹಲಿ, ಜ. 27 (ಪಿಟಿಐ)– ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಗೆ ಕಾರಣವಾದ ಪರಿಸ್ಥಿತಿಯ ಬಗ್ಗೆ ವರ್ಮಾ ಆಯೋಗ ತನಿಖೆ ನಡೆಸಿ ನೀಡಿರುವ ವರದಿಯಲ್ಲಿ ಹೆಸರಿಸಲಾಗಿರುವ ಉನ್ನತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ.
ಈ ಪ್ರಸ್ತಾವನೆಗೆ ಕೇಂದ್ರ ಸಂಪುಟ ಕಳೆದ ವಾರ ಒಪ್ಪಿಗೆ ನೀಡಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.