ಸಿ.ಪಿ.ರಾಧಾಕೃಷ್ಣನ್
ಜಗದೀಪ್ ಧನಕರ್ ಅವರ ದಿಢೀರ್ ರಾಜೀನಾಮೆಯಿಂದ ತೆರವಾಗಿರುವ ಉಪರಾಷ್ಟ್ರಪತಿ ಹುದ್ದೆಗೆ ಸೆಪ್ಟೆಂಬರ್ 9ರಂದು ಚುನಾವಣೆ ನಡೆಯಲಿದೆ. ಎನ್ಡಿಎಯು ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದರೆ, ‘ಇಂಡಿಯಾ’ ಕೂಟವು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಬಿ.ಸುದರ್ಶನ ರೆಡ್ಡಿ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ರಾಜಕಾರಣ ಮತ್ತು ಆಡಳಿತದ ಸುದೀರ್ಘ ಅನುಭವವಿರುವ ಸಿ.ಪಿ.ರಾಧಾಕೃಷ್ಣನ್ ಅವರ ಪರಿಚಯ ಇಲ್ಲಿದೆ..
**********
ಬಿಜೆಪಿ, ಆರ್ಎಸ್ಎಸ್ ವಲಯದಲ್ಲಿ ‘ಸಿಪಿಆರ್’ ಎಂದೇ ಕರೆಸಿಕೊಳ್ಳುವ, ಮಹಾರಾಷ್ಟ್ರದ ರಾಜ್ಯಪಾಲ ಚಂದ್ರಾಪುರಂ ಪೊನ್ನುಸ್ವಾಮಿ ರಾಧಾಕೃಷ್ಣನ್, ಸೆ. 9ರಂದು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಅಭ್ಯರ್ಥಿ. 1957ರ ಮೇ 4ರಂದು ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ತಿರುಪ್ಪೂರ್ನಲ್ಲಿ ಜನಿಸಿರುವ ರಾಧಾಕೃಷ್ಣನ್ ಆರ್ಎಸ್ಎಸ್ ಕಟ್ಟಾಳು, ಬಿಜೆಪಿ ನಿಷ್ಠ. ಸಾರ್ವಜನಿಕ ಜೀವನದಲ್ಲಿ ಐದು ದಶಕಗಳಷ್ಟು ಅನುಭವ ಹೊಂದಿರುವ 68 ವರ್ಷ ವಯಸ್ಸಿನ ರಾಧಾಕೃಷ್ಣನ್ ಅವರನ್ನು ಬೆಂಬಲಿಗರು ‘ತಮಿಳುನಾಡಿನ ವಾಜಪೇಯಿ’ ಎಂದು ಕರೆಯುವುದುಂಟು.
16ರ ಹರೆಯದಲ್ಲೇ ಆರ್ಎಸ್ಎಸ್ ಮತ್ತು ಜನಸಂಘದ ಸಂಪರ್ಕಕ್ಕೆ ಬರುವ ಮೂಲಕ ಸಿಪಿಆರ್ ಅವರ ರಾಜಕೀಯ ಜೀವನದ ಹಾದಿ ತೆರೆದುಕೊಂಡಿತು. ಆ ದಾರಿಯುದ್ದಕ್ಕೂ ಪಕ್ಷ ಹಾಗೂ ಸರ್ಕಾರದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ ಅವರು ಈಗ ಉಪರಾಷ್ಟ್ರಪತಿ ಹುದ್ದೆಯತ್ತ ದೃಷ್ಟಿ ನೆಟ್ಟಿದ್ದಾರೆ. ಎನ್ಡಿಎ ಸಂಸತ್ತಿನಲ್ಲಿ ಬಹುಮತ ಹೊಂದಿರುವುದರಿಂದ ಅವರ ಆಯ್ಕೆ ಬಹುತೇಕ ಖಚಿತ.
ಪಕ್ಷದಲ್ಲಿ ರಾಧಾಕೃಷ್ಣನ್ ಹೊಣೆಗಾರಿಕೆ ಶುರುವಾಗಿದ್ದು 1974ರಲ್ಲಿ. ತಮಿಳುನಾಡು ರಾಜ್ಯ ಬಿಜೆಪಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ನೇಮಕವಾದರು. 1996ರಲ್ಲಿ ರಾಜ್ಯ ಬಿಜೆಪಿ ಘಟಕದ ಕಾರ್ಯದರ್ಶಿಯಾದರು. 1998ರ ಲೋಕಸಭಾ ಚುನಾವಣೆಯಲ್ಲಿ ಕೊಯಮತ್ತೂರು ಕ್ಷೇತ್ರದಿಂದ ಸ್ಪರ್ಧಿಸಿ, 1.40 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದರು. 1999ರ ಚುನಾವಣೆಯಲ್ಲೂ ಕೊಯಮತ್ತೂರಿನ ಜನ ಅವರನ್ನು ಆಯ್ಕೆ ಮಾಡಿದರು. ಪ್ರಧಾನಿಯಾಗಿ ಆಯ್ಕೆಯಾಗಿದ್ದ ವಾಜಪೇಯಿ ಅವರು ರಾಧಾಕೃಷ್ಣನ್ ಅವರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸಲು ತೀರ್ಮಾನಿಸಿದ್ದರು. ಆದರೆ, ಕೊನೆ ಕ್ಷಣದಲ್ಲಿ ಅವರಿಗೆ ಸಚಿವ ಸ್ಥಾನ ಕೈತಪ್ಪಿತ್ತು ಎಂದು ಹೇಳುತ್ತಾರೆ ಅವರ ಆಪ್ತ ವಲಯದಲ್ಲಿರುವವರು.
ಸಂಸತ್ ಸದಸ್ಯರಾಗಿ ಐದು ವರ್ಷಗಳಲ್ಲಿ ಅವರಿಗೆ ಹಲವು ಜವಾಬ್ದಾರಿಗಳು ಸಿಕ್ಕಿದವು. ಜವಳಿಗೆ ಸಂಬಂಧಿಸಿದ ಸಂಸತ್ತಿನ ಸ್ಥಾಯಿ ಸಮಿತಿಯ ಅಧ್ಯಕ್ಷರಾದರು. ಸರ್ಕಾರಿ ಸ್ವಾಮ್ಯದ ಕಂಪನಿಗಳ ಸಂಸದೀಯ ಸಮಿತಿ ಮತ್ತು ಹಣಕಾಸಿಗೆ ಸಂಬಂಧಿಸಿದ ಸಲಹಾ ಸಮಿತಿಯ ಸದಸ್ಯರಾದರು. ಷೇರುಪೇಟೆ ಹಗರಣದ ತನಿಖೆ ನಡೆಸಿದ್ದ ಸಂಸತ್ತಿನ ವಿಶೇಷ ಸಮಿತಿಯ ಸದಸ್ಯರಲ್ಲಿ ಇವರೂ ಒಬ್ಬರು.
2004ರ ಬಳಿಕ ರಾಧಾಕೃಷ್ಣನ್ ಅವರಿಗೆ ಚುನಾವಣಾ ರಾಜಕೀಯದಲ್ಲಿ ಗೆಲುವು ಒಲಿಯಲಿಲ್ಲ. 2004 ಹಾಗೂ ನಂತರದ ಎರಡು ಲೋಕಸಭಾ ಚುನಾವಣೆಗಳಲ್ಲಿ (2009, 2014) ಕೊಯಮತ್ತೂರಿನಿಂದ ಅವರು ಮತ್ತೆ ಆಯ್ಕೆ ಬಯಸಿದರಾದರೂ, ಜನ ತಿರಸ್ಕರಿಸಿದರು.
ಕೈ ಬಿಡದ ಪಕ್ಷ ನಿಷ್ಠೆ: ಚುನಾವಣೆಯಲ್ಲಿ ಕಹಿ ಉಂಡರೇನಂತೆ? ಸಂಘ ಹಾಗೂ ಪಕ್ಷ ನಿಷ್ಠೆ ಅವರಿಗೆ ಸಿಹಿಯನ್ನೇ ಉಣ್ಣಿಸಿತು. 2004–07ರ ನಡುವೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕಗೊಂಡರು. ತಮಿಳುನಾಡಿನಲ್ಲಿ ಪಕ್ಷ ಸಂಘಟಿಸುವುದಕ್ಕಾಗಿ ಅವರು ನಡೆಸಿದ 19 ಸಾವಿರ ಕಿ.ಮೀ ರಥಯಾತ್ರೆ ರಾಜ್ಯದಲ್ಲಷ್ಟೇ ಅಲ್ಲ; ದೇಶದ ಗಮನವನ್ನೂ ಸೆಳೆಯಿತು. ನದಿಗಳ ಜೋಡಣೆ, ಭಯೋತ್ಪಾದನೆ ನಿರ್ಮೂಲನೆ, ಏಕರೂಪ ನಾಗರಿಕ ಸಂಹಿತೆ ಜಾರಿ, ಅಸ್ಪೃಶ್ಯತೆ ನಿವಾರಣೆ ಮತ್ತು ಮಾದಕ ದ್ರವ್ಯ ಪಿಡುಗಿನ ವಿರುದ್ಧ ಆರಂಭಿಸಿದ್ದ ರಥಯಾತ್ರೆ 93ನೇ ದಿನ ಮುಕ್ತಾಯ ಕಂಡಿತು.
ಕೊಚ್ಚಿಯ ತೆಂಗಿನ ನಾರು ಮಂಡಳಿಯ ಅಧ್ಯಕ್ಷರಾಗಿ 2016ರಲ್ಲಿ ರಾಧಾಕೃಷ್ಣನ್ ನೇಮಕಗೊಂಡರು. ವ್ಯಾವಹಾರಿಕ ಆಡಳಿತದಲ್ಲಿ ಪದವಿ ಶಿಕ್ಷಣ (ಬಿಬಿಎ) ಪಡೆದಿರುವ ಅವರು ಜವಳಿ ಉದ್ಯಮಿಯಾಗಿಯೂ ಗುರುತಿಸಿಕೊಂಡವರು. ಉದ್ಯಮದಲ್ಲಿ ಅವರಿಗಿದ್ದ ಅನುಭವ ನಾರು ಮಂಡಳಿಯ ಅಧ್ಯಕ್ಷರಾದಾಗ ನೆರವಿಗೆ ಬಂತು. ಅವರ ನೇತೃತ್ವದಲ್ಲಿ ಮಂಡಳಿಯ ರಫ್ತು ವಹಿವಾಟು ದಾಖಲೆ ಬರೆಯಿತು .
2020ರಿಂದ 2022ರವರೆಗೆ ಕೇರಳದಲ್ಲಿ ಪಕ್ಷದ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದರು. ಆ ಬಳಿಕ ರಾಧಾಕೃಷ್ಣನ್ ಅವರನ್ನು ಸಾಂವಿಧಾನಿಕ ಹುದ್ದೆ ಅರಸಿಕೊಂಡು ಬಂತು. 2023ರ ಫೆ.18ರಂದು ಜಾರ್ಖಂಡ್ನ ರಾಜ್ಯಪಾಲರಾಗಿ ನೇಮಕಗೊಂಡರು. ಒಂದೂವರೆ ವರ್ಷ ಕರ್ತವ್ಯ ನಿರ್ವಹಿಸಿದ ಬಳಿಕ, 2024ರ ಜುಲೈ 31ರಿಂದ ಮಹಾರಾಷ್ಟ್ರದ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದರ ಜೊತೆಗೆ ಸಂಕ್ಷಿಪ್ತ ಅವಧಿಗೆ ತೆಲಂಗಾಣ ರಾಜ್ಯಪಾಲ ಮತ್ತು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಹುದ್ದೆಯ ಜವಾಬ್ದಾರಿಯನ್ನೂ ನಿಭಾಯಿಸಿದರು.
ಸೆ.9ರಂದು ನಡೆಯುವ ಚುನಾವಣೆಯಲ್ಲಿ ರಾಧಾಕೃಷ್ಣನ್ ಆಯ್ಕೆಯಾದರೆ, ಅವರು ದಕ್ಷಿಣ ಭಾರತದಿಂದ ಉಪರಾಷ್ಟ್ರಪತಿ ಹುದ್ದೆಗೆ ಏರಿದ ಮೊದಲ ಹಿಂದುಳಿದ ವರ್ಗದ ವ್ಯಕ್ತಿಯಾಗಲಿದ್ದಾರೆ.
––––
ಆಯ್ಕೆ ಹಿಂದೆ ಬಿಜೆಪಿ ಲೆಕ್ಕಾಚಾರ
ರಾಧಾಕೃಷ್ಣನ್ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದರ ಹಿಂದೆ ಬಿಜೆಪಿಯ ಕೆಲವು ಲೆಕ್ಕಾಚಾರಗಳಿವೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.ಆರ್ಎಸ್ಎಸ್ನೊಂದಿಗೆ ಹಳಸಿರುವ ಸಂಬಂಧವನ್ನು ಸರಿ ಮಾಡುವ ಉದ್ದೇಶ ಒಂದಾದರೆ, ಮುಂದಿನ ವರ್ಷ ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಕಾರಣಕ್ಕೆ ಬಿಜೆಪಿ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗುತ್ತಿದೆ. ‘ರಾಧಾಕೃಷ್ಣನ್ ಕಳಂಕರಹಿತ ವ್ಯಕ್ತಿತ್ವದವರು’ ಎಂದು ಬಿಂಬಿಸುತ್ತಿರುವ ಎನ್ಡಿಎ ಮುಖಂಡರು, ‘ಆಡಳಿತದಲ್ಲಿ ದೀರ್ಘ ಅನುಭವ ಹೊಂದಿರುವುದರಿಂದ ಸಭಾಪತಿಯಾಗಿ ರಾಜ್ಯಸಭೆಯ ಕಲಾಪವನ್ನು ಸುಗಮವಾಗಿ ನಡೆಸಲು ಅವರಿಗೆ ಸಾಧ್ಯವಾಗಲಿದೆ’ ಎಂದು ಹೇಳುತ್ತಾ ವಿರೋಧ ಪಕ್ಷಗಳ ಬೆಂಬಲ ಯಾಚಿಸುತ್ತಿದ್ದಾರೆ.
ರಾಜಭವನ ದುರ್ಬಳಕೆಯ ಆರೋಪ
ರಾಧಾಕೃಷ್ಣನ್ ಅವರು ಕಳೆದ ವರ್ಷ ಜಾರ್ಖಂಡ್ನ ರಾಜ್ಯಪಾಲರಾಗಿದ್ದಾಗ ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಯಾಗಿದ್ದ ಹೇಮಂತ್ ಸೊರೇನ್ ಅವರು ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಸ್ವಲ್ಪ ಹೊತ್ತಿನಲ್ಲಿ ಅವರನ್ನು ಜಾರಿ ನಿರ್ದೇಶನಾಲಯವು ಬಂಧಿಸಿತ್ತು. ತಮ್ಮ ಬಂಧನದ ಷಡ್ಯಂತ್ರದಲ್ಲಿ ರಾಜಭವನವೂ ಭಾಗಿಯಾಗಿದೆ ಎಂದು ಹೇಮಂತ್ ಆರೋಪಿಸಿದ್ದರು. ಆದರೆ ಇದನ್ನು ರಾಧಾಕೃಷ್ಣನ್ ಅವರು ನಿರಾಕರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.