ADVERTISEMENT

ಅಂಗನವಾಡಿ ವ್ಯವಸ್ಥೆ ಬದಲಾಗಲಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2012, 19:30 IST
Last Updated 15 ಜನವರಿ 2012, 19:30 IST

ವಿದ್ಯಾರ್ಥಿಗಳ ಕೊರತೆಯ ನೆಪದಲ್ಲಿ ಸರ್ಕಾರಿ ಶಾಲೆ ವಿಲೀನ ಪ್ರಕ್ರಿಯೆಗೆ ನಮ್ಮ ಅಂಗನವಾಡಿಗಳೂ ಕಾರಣ.

ಮೂಲಭೂತ ಸೌಕರ್ಯಗಳಿಲ್ಲದ ಕಟ್ಟಡಗಳು, ಕಲಿಕಾ ಪರಿಸರದ ಕೊರತೆ ಮತ್ತು ಸಾಂಪ್ರದಾಯಿಕ ಬೋಧನಾ ವಿಧಾನಗಳಿಂದ ನಮ್ಮ ಪೂರ್ವ ಪ್ರಾಥಮಿಕ ಶಿಕ್ಷಣ ವ್ಯವಸ್ಥೆ ಕಳೆಗುಂದಿದೆ.

ರಾಜ್ಯ ಸರ್ಕಾರ  `ಗುಣಾತ್ಮಕ ಶಿಕ್ಷಣಕ್ಕೆ ಕ್ರಿಯಾಶೀಲ ಆಡಳಿತ~ ಎಂಬ ತತ್ವದಡಿ ಕಿರಿಯ, ಹಿರಿಯ ಪ್ರಾಥಮಿಕ, ಮತ್ತು ಪ್ರೌಢಶಾಲೆಗಳಲ್ಲಿ ವಿಶೇಷ ಬದಲಾವಣೆ ಮಾಡುತ್ತಿದೆ.

ಆದರೆ ಗ್ರಾಮೀಣ ಮಕ್ಕಳ ಶಿಕ್ಷಣದ ಆರಂಭಿಕ ಹಂತವಾದ ಅಂಗನವಾಡಿಗಳನ್ನು ಸಂಪೂರ್ಣ ನಿರ್ಲಕ್ಷ್ಯಿಸಿದೆ. ಇದು ಸರಿಯಾಗಿ ಅಡಿಪಾಯ ಹಾಕದೆ ಬೃಹತ್ ಕಟ್ಟಡ ಕಟ್ಟಲು ಹೊರಟಂತಿದೆ.

ಸರ್ಕಾರ ಈ ಹಂತದ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ಕೆಲಸಕ್ಕೆ ಮುಂದಾಗಲಿ. ಸೌಲಭ್ಯಗಳಿರುವ ಕಟ್ಟಡ, ಮಕ್ಕಳ ಮನೋವಿಕಾಸಕ್ಕೆ ಬೇಕಾಗುವ ಸಾಮಗ್ರಿಗಳು, ಉತ್ತಮ ವಿದ್ಯಾರ್ಹತೆ, ತರಬೇತಿ ಪಡೆದ ಶಿಕ್ಷಕಿಯರ ನೇಮಕ, ಅವರಿಗೆ ಆಕರ್ಷಕ ವೇತನ ನೀಡುವ ಕಡೆಗೆ ಗಮನ ಕೊಡಬೇಕು.

ADVERTISEMENT

ಅಂಗನವಾಡಿ ಎಂಬ ಹೆಸರಿಗೆ ಬದಲು `ಸರ್ಕಾರಿ ಮಾದರಿ ನರ್ಸರಿ ಶಾಲೆ~ ಎಂದು ಮರುನಾಮಕರಣ ಮಾಡಬೇಕು.

ಈ ಬದಲಾವಣೆಗಳನ್ನು ಮಾಡಿದರೆ ಪೂರ್ವ ಪ್ರಾಥಮಿಕ ಹಂತದ ಸರ್ಕಾರಿ ಶಿಕ್ಷಣ ವ್ಯವಸ್ಥೆ ಬಲಗೊಳ್ಳುತ್ತದೆ. ಪಾಲಕರು ಖಾಸಗಿ ಶಾಲೆಗಳನ್ನು ಹುಡುಕಿಕೊಂಡು ಹೋಗುವ ಬದಲು ಗುಣಾತ್ಮಕ ಸರ್ಕಾರಿ ನರ್ಸರಿ ಶಾಲೆಗಳತ್ತ ಮುಖ ಮಾಡುತ್ತಾರೆ.
 
ಈಗ ಪಾಲಕರು ಖಾಸಗಿ ನರ್ಸರಿ ಶಾಲೆಗಳ ಆಡಂಬರಕ್ಕೆ ಮಾರುಹೋಗಿ ತಮ್ಮ ಮಕ್ಕಳನ್ನು ಆ ಶಾಲೆಗಳಿಗೆ  ದಾಖಲಿಸುತ್ತಿದ್ದಾರೆ.

ಒಮ್ಮೆ ಈ ಶಾಲೆಗೆ ಸೇರಿದ ಮಗುವನ್ನು 7ನೆಯ ತರಗತಿ ಮುಗಿಯುವವರೆಗೆ ಬೇರೆ ಕಡೆ ದಾಖಲಾಗಲು ಆ ಶಾಲೆಗಳು ಅವಕಾಶ ಕೊಡುವುದಿಲ್ಲ.

ಮೊದಲ ಹಂತದಲ್ಲಿ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಆಕರ್ಷಿಸಿದರೆ ಶಿಕ್ಷಣ ಗುಣಮಟ್ಟ ಸುಧಾರಿಸುತ್ತದೆ. ಶಾಲೆಗಳನ್ನು ಮುಚ್ಚುವ ಸಮಸ್ಯೆ ಬರುವುದಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.