ADVERTISEMENT

ಅನಂತಮೂರ್ತಿ ವಿರುದ್ಧ ಟೀಕೆ ನಿಲ್ಲಲಿ

ಪ್ರಜಾವಾಣಿ ವಿಶೇಷ
Published 16 ಜೂನ್ 2014, 19:30 IST
Last Updated 16 ಜೂನ್ 2014, 19:30 IST

ಕನ್ನಡದ ಹಿರಿಯ ಲೇಖಕ ಮತ್ತು ಚಿಂತಕ ಡಾ. ಯು.ಆರ್. ಅನಂತಮೂರ್ತಿಯವರಿಗೆ ಅವರ ಒಂದು ರಾಜಕೀಯ ಅಭಿಪ್ರಾಯ ಮತ್ತು ತಮ್ಮ ವೈಚಾರಿಕ ಲೇಖನವೊಂದರಲ್ಲಿ ದಾಖಲಿ­ಸಿದ ಒಂದು  ಪ್ರಸಂಗವನ್ನು ನೆಪವಾಗಿಟ್ಟು­ಕೊಂಡು ಕರ್ನಾಟಕದ ಕೆಲವು ಪಟ್ಟಭದ್ರ ಹಿತಾ­ಸಕ್ತಿ­ಗಳು ಮಾನಸಿಕ ಕಿರುಕುಳ ನೀಡುತ್ತಿರುವ ಪ್ರವೃತ್ತಿ  ಮುಂದುವರೆದಿರುವುದು ವಿಷಾದಕರ.

ನಾವು ಕೆಲವರು ಇತ್ತೀಚೆಗೆ ಅನಂತಮೂರ್ತಿ­ಯವರನ್ನು ಭೇಟಿ ಮಾಡಲು ಹೋಗಿದ್ದ ಸಂದರ್ಭ­ದಲ್ಲೂ ಅವರಿಗೆ ನಿಂದನಾ ಕರೆಗಳು ಬಂದಿದ್ದನ್ನೂ, ಅದ­ರಿಂದ ಅನಂತಮೂರ್ತಿ­ಯ­ವರ ಕುಟುಂಬ ಅನುಭವಿ­ಸುತ್ತಿರುವ ನೋವನ್ನು ಕಣ್ಣಾರೆ ಕಂಡು ಈ ಪತ್ರ ಬರೆಯುತ್ತಿದ್ದೇವೆ.

ನಮ್ಮ ಸಂವಿಧಾನ, ಈ ದೇಶದಲ್ಲಿ ಪ್ರತಿ­ಯೊ­ಬ್ಬ­­ರಿಗೂ ರಾಜಕೀಯ ಅಭಿಪ್ರಾಯದ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ನೀಡಿದೆ. ಅನಂತ­ಮೂರ್ತಿ­ಯವರೂ ಈ ದೇಶದ ಪ್ರಜೆಯಾಗಿ ಅದನ್ನು ಚಲಾಯಿಸಿದ್ದಾರೆ. ಮೋದಿಯವರನ್ನು ಕುರಿತ ಅವರ ಅಭಿಪ್ರಾಯ ತೀವ್ರವಾಗಿರ­ಬಹುದು. ಆದರೆ ಅದು ಸಂವಿಧಾನ ಅಥವಾ ಸಭ್ಯತೆಯ ಚೌಕಟ್ಟ­ನ್ನು ಮೀರಿರಲಿಲ್ಲ. ಮಾಧ್ಯಮ­ಗಳು ತಮ್ಮ ಮಾತುಗಳನ್ನು ತಿರುಚಿ ಪ್ರಕಟಿಸಿವೆ ಎಂದು ಅವರು ಬಹು ಹಿಂದೆಯೇ ಸ್ಪಷ್ಟೀಕರಣ­ವನ್ನು  ನೀಡಿದ್ದಾರೆ.

ಹಾಗೇ, ಇತ್ತೀಚೆಗೆ ಕನ್ನಡದ ಹಿರಿಯ ವಿದ್ವಾಂಸ ಎಂ.ಎಂ. ಕಲಬುರ್ಗಿ­ಯವರು, ಬಸವಶ್ರೀ ಪ್ರಶಸ್ತಿ ಹೆಸರಿನಲ್ಲಿ ಅನಂತ­ಮೂರ್ತಿ­ಯವರನ್ನು ವಿವಾದ­ಕ್ಕೀಡು ಮಾಡುವ ತಮ್ಮ ವಿಫಲ ಪ್ರಯತ್ನದ ನಂತರ ಈಗ ಮತ್ತೊಂದು ವಿವಾದ ಸೃಷ್ಟಿಸುವ ಪ್ರಯತ್ನ ಮಾಡಿರುವುದು ಕನ್ನಡ ಸಾಹಿತ್ಯ- ಸಂಸ್ಕೃತಿ­ಗಳ ಆರೋಗ್ಯಕರ ಬೆಳವಣಿಗೆಯ ದೃಷ್ಟಿಯಿಂದ  ಶೋಚನೀಯ ಸಂಗತಿಯಾಗಿದೆ.

ಅವರು ಯಾವುದೋ ಸಮಾರಂಭದಲ್ಲಿ ಮೂಢ­ನಂಬಿಕೆಗಳ ಬಗ್ಗೆ ಮಾತನಾಡುತ್ತಾ, ಅನಂತ­­ಮೂರ್ತಿ­ಯವರು ತಮ್ಮ ಲೇಖನ­ವೊಂದರಲ್ಲಿ ದಾಖಲಿಸಿರುವ ತಮ್ಮ ಬಾಲ್ಯದ ಪ್ರಸಂಗವೊಂದನ್ನು ಅನಗತ್ಯವಾಗಿ ಮತ್ತು ತಪ್ಪಾಗಿ ಉಲ್ಲೇಖಿಸಿ ಅವರ ಬಗ್ಗೆ ಸಾಮಾನ್ಯ ಜನತೆಯಲ್ಲಿ ತಪ್ಪು ಅಭಿಪ್ರಾಯವನ್ನು ಮೂಡಿಸಲು ಕಾರಣ­ರಾಗಿದ್ದಾರೆ.

ಸಂಪೂರ್ಣವಾಗಿ ವೈಯಕ್ತಿಕ ನೆಲೆಯ ಈ ಸೂಕ್ಷ್ಮ ಸಾಹಿತ್ಯಕ ನಿರೂಪಣೆಯು ಕಲಬುರ್ಗಿ­ಯವರ ಅನುಚಿತ ರೀತಿಯ ಉಲ್ಲೇಖ ಮತ್ತು ಸ್ಥೂಲ ಮಾಧ್ಯಮ ವರದಿಗಾರಿಕೆಯಿಂದಾಗಿ ಒಂದು ಸಾರ್ವಜನಿಕ ದೈವಶ್ರದ್ಧೆಯ ಪ್ರಶ್ನೆಯಾಗಿ ಮಾರ್ಪಟ್ಟು ದೊಡ್ಡ ಅನಾಹುತವನ್ನೇ ಸೃಷ್ಟಿಸಿದೆ.

ಇದು ಬೌದ್ಧಿಕ ವಿವೇಚನೆ, ಸೂಕ್ಷ್ಮ ಸಾಹಿತ್ಯಕ, -ಸಾಂಸ್ಕೃತಿಕ ಚರ್ಚೆಗಳಿಗೆ ಅನುಕೂಲಕರ ವಾತಾ­ವರಣ­ವಿಲ್ಲದ ಕೆಟ್ಟ ಕಾಲ. ಇದನ್ನರಿತು ನಮ್ಮ ಲೇಖಕ- ಚಿಂತಕರೂ, ಸಮಾನ ಮನಸ್ಕ ವಲಯ­ಗಳಲ್ಲಿ ಮಾತ್ರ ಚರ್ಚೆಗೆ ಸಲ್ಲುವ ವಿಷಯಗಳನ್ನು ಸಾರ್ವಜನಿಕ ವಲಯಗಳಲ್ಲಿ ಚರ್ಚೆಗೆ ತಂದು ಮಾಧ್ಯಮ­ಗಳ ಮತ್ತು ಅವುಗಳ ಹಿಂದಿರುವ ಪ್ರತಿಗಾಮಿ ಶಕ್ತಿಗಳಿಗೆ ಆಹಾರ ಒದಗಿಸುವ ಸುದ್ದಿ­ಶೂರತ್ವ ಮತ್ತು ಪ್ರಚಾರ ಪ್ರಿಯತೆಯಿಂದ ದೂರ ಉಳಿಯುವುದು ಒಳಿತೆಂದು ನಾವು ಭಾವಿಸುತ್ತೇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.