ನಗರದಲ್ಲಿ ಆಗಾಗ್ಗೆ ಪ್ರಾಮಾಣಿಕ ಆಟೊ ಚಾಲಕರು ಪತ್ರಿಕೆಯಲ್ಲಿ ವರದಿಯಾಗುತ್ತಾರೆ. ಇದು ನಿಜಕ್ಕೂ ಸಂತೋಷಕರವಾದದ್ದು. ಜನಸೇವೆಯಲ್ಲಿ ತೊಡಗಿದ್ದು ಜನರ ಬವಣೆಯನ್ನು ಅರಿಯುವ ಚಾಲಕರು ಬೇಕು. ಆದರೆ ಇಂದು ಬಹುತೇಕ ಚಾಲಕರು ಇದಕ್ಕೆ ಹೊರತಾಗಿರುವುದು ವಿಷಾದಕರ.
ಇತ್ತಿಚೆಗೆ ರಾಜಾಜಿನಗರದಲ್ಲಿನ ನಾರಾಯಣ ನೇತ್ರಾಲಯದಿಂದ ಬಂದ ವೃದ್ಧರಿಗೆ ಆದ ಅನುಭವ ಬೇಸರ ಹುಟ್ಟಿಸುವಂತಿತ್ತು. ಆಸ್ಪತ್ರೆಯಿಂದ ಮನೆಗೆ ಹೋಗಲು ಆಟೊ ಚಾಲಕರಿಗೆ ಅವರು ಗೋಗರೆಯುತ್ತಿದ್ದರು. ಹತ್ತಿರದ ಸ್ಥಳಕ್ಕೆ ಹೋಗಲು ಚಾಲಕರು ನಿರಾಕರಿಸುವುದು ಸಾಮಾನ್ಯ. ಆದರೆ ಆಸ್ಪತ್ರೆಯ ಬಳಿಯಾದರೂ ಹಿರಿಯ ನಾಗರಿಕರಿಗಾಗಿ ಸ್ಪಂದಿಸಿ, ಹೃದಯವಂತಿಕೆ ತೋರಿದರೆ ಒಳಿತು.
- ಎಚ್. ಡಿ. ಲಕ್ಷ್ಮೀನಾರಾಯಣ
ಹೆಚ್ಚಿನ ಬಸ್ ಹಾಕಿರಿ
ಕೆ. ಆರ್. ಮಾರ್ಕೆಟ್ನಿಂದ ಕೆಂಗೇರಿ ಮೂಲಕ ಕೋಡಿಪಾಳ್ಯ, ಗೊಲ್ಲಹಳ್ಳಿ, ಕಾರುಬೆಲೆ, ದೊಡ್ಡಿಪಾಳ್ಯ ಮುಂತಾದ ಕಡೆಗೆ 224ರ ಬಸ್ಗಳನ್ನು ಹಾಕಿರುತ್ತೀರಿ. ಆದರೆ ಈ ಬಸ್ಗಳು ಸಾಲದು. ಅವು ಸಕಾಲಕ್ಕೆ ನಿಲ್ದಾಣಗಳಿಗೆ ಬರುತ್ತಿಲ್ಲ. ಪ್ರಯಾಣಿಕರು ಗಂಟೆಗಟ್ಟಲೆ ಕಾಯಬೇಕಾಗಿದೆ.
ನಿಲ್ದಾಣಗಳಲ್ಲಿ ಪ್ರಯಾಣಿಕರು ಇರುವುದಿಲ್ಲ ಎಂದು ಚಾಲಕರು ಬಸ್ಗಳನ್ನು ಬೇರೆ ಮಾರ್ಗವಾಗಿ ಓಡಿಸುತ್ತಿದ್ದಾರೆ. ಈ ಮಾರ್ಗದಲ್ಲಿ ಈಗಿರುವ ಬಸ್ಗಳ ಜೊತೆಗೆ ಇನ್ನೂ ಕೆಲವು ಬಸ್ಗಳನ್ನು ಹೆಚ್ಚು ಹಾಕಿ ಪ್ರಯಾಣಿಕರ ತೊಂದರೆಯನ್ನು ನೀಗಿಸಬೇಕಾಗಿ ವಿನಂತಿ.
- ವೈ. ಸತೀಶ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.