ADVERTISEMENT

ಆಸಿಡ್ ದಾಳಿ: ವಿಚಾರಣೆಗೆ ಕಾಲಮಿತಿ ಬೇಕು

ಡಾ.ಮ.ನ.ಜವರಯ್ಯ, ಮೈಸೂರು
Published 23 ಜುಲೈ 2012, 19:30 IST
Last Updated 23 ಜುಲೈ 2012, 19:30 IST

ಮಹಿಳೆಯರ ಮೇಲೆ ಆಗಾಗ ಕಾಣಿಸಿಕೊಳ್ಳುವ ಆಸಿಡ್ ದಾಳಿಗೆ ಸಂಬಂಧಿಸಿದ ಕರುಡು ವಿಧೇಯಕಕ್ಕೆ, ಕೇಂದ್ರ ಸಚಿವ ಸಂಪುಟವು ಅಂಗೀಕಾರ ನೀಡಿರುವುದು ಸ್ವಾಗತಾರ್ಹ.

ಅದರಲ್ಲೂ ಮುಖ್ಯವಾಗಿ, ಆಸಿಡ್ ದಾಳಿ ಪ್ರಕರಣದಲ್ಲಿ ಅಪರಾಧ ರುಜುವಾತಾದಂಥ ಅಪರಾಧಿಗೆ ಐ.ಪಿ.ಸಿ. ಕಲಂ 326 ಮತ್ತು 306ರ ಪ್ರಕಾರ, ಕೇವಲ ಎರಡು ಅಥವಾ ಮೂರು ವರ್ಷ ಸೆರೆವಾಸ ವಿಧಿಸಲಾಗುತ್ತಿತ್ತು. ಆದರೆ, ಅಂಥ ಅಪರಾಧಗಳಿಗೆ ಹತ್ತು ವರ್ಷಗಳ ಸೆರೆವಾಸವೆಂಬ ಈ ನೂತನ ಕಾಯಿದೆ ಸಾಕಷ್ಟು ಕಠಿಣವಾಗಿರುವುದು ಕೂಡ ಸರಿಯೆ.

ಆದರೆ, ಆಸಿಡ್ ದಾಳಿಯಂಥ ಅಪರಾಧಗಳ ವಿಚಾರಣೆ ನಡೆಸುವ ಪ್ರಕ್ರಿಯೆಗೆ, ಒಂದು ನಿರ್ದಿಷ್ಟ ಕಾಲಮಿತಿ ನಿಗದಿಪಡಿಸುವುದು ಕೂಡ ಅತ್ಯಂತ ಅಗತ್ಯವೆಂದು ತೋರುತ್ತದೆ.

ಏಕೆಂದರೆ, ಆಸಿಡ್ ದಾಳಿಯಂಥ ಅಪರಾಧದ ಕುರಿತ ನ್ಯಾಯಾಂಗ ವಿಚಾರಣೆ ಎಷ್ಟೋ ವರ್ಷಗಳವರೆಗೆ ಸಾಗುವುದರಿಂದ, ಅಂಥ ಅಪರಾಧಕ್ಕೆ ನೀಡಲಾಗುವ ಶಿಕ್ಷೆಯ ಗಾಂಭೀರ್ಯ, ಆ ವೇಳೆಗೆ ಸಾಕಷ್ಟು ಕ್ಷೀಣಿಸುತ್ತಾ ಹೋಗಲೂಬಹುದು. ತತ್ಪರಿಣಾಮವಾಗಿ, ಸಮಾಜದ ಮೇಲೆ ಅಂತಹ ಶಿಕ್ಷೆಗಳ ಪರಿಣಾಮ ಕ್ಷೀಣಿಸುತ್ತ ಹೋಗಲೂಬಹುದು.

ಇನ್ನು ವಾಣಿಜ್ಯ ಮತ್ತು ವಿಜ್ಞಾನದ ಪ್ರಯೋಗಾಲಯಗಳಿಗೆ ಮಾತ್ರ ಆಸಿಡ್ ವಿತರಣೆ ಮಾಡಬೇಕೆಂದು, ಸುಪ್ರೀಂಕೋರ್ಟ್ ಸರ್ಕಾರಕ್ಕೆ ಸಲಹೆ ನೀಡಿದೆಯಾದರೂ, ವಾಣಿಜ್ಯ ಮತ್ತು ಪ್ರಯೋಗಾಲಯಗಳಿಗೆ ವಿತರಿಸಲಾಗುವ ಆಸಿಡ್‌ನ ದುರುಪಯೋಗ ಆಗುವುದೇ ಇಲ್ಲವೆಂಬ ತೀರ್ಮಾನ ಪ್ರಾಯಶಃ ಕಷ್ಟಸಾಧ್ಯ. ಬದಲಾಗಿ, ಅಂಥ ಅಪರಾಧಗಳ ವಿಚಾರಣೆಯ ಕಾಲಮಿತಿ ಮತ್ತು ಕಠಿಣ ಶಿಕ್ಷೆ ಮಾತ್ರ ಪರಿಣಾಮಕಾರಿ ಎಂದೆನಿಸುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.