ಶಿಷ್ಟಾಚಾರ ಏನೇ ಇರಲಿ, ಬೀದರ್- ಕಲಬುರ್ಗಿ ರೈಲು ಮಾರ್ಗ ಉದ್ಘಾಟನೆ ಸಂದರ್ಭದಲ್ಲಿ, ಆ ಭಾಗದ ಹಿರಿಯ ರಾಜಕಾರಣಿ ಮತ್ತು ಕಲಬುರ್ಗಿಯ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಮಂತ್ರಿಸದೇ ಇದ್ದುದು ಒಳ್ಳೆಯದಲ್ಲ. ಪ್ರಧಾನಿ ಮೋದಿಯವರೇ ತಮ್ಮ ಅಧಿಕಾರ ಅವಧಿಯಲ್ಲಿ ‘ಶಿಷ್ಟಾಚಾರ’ ವನ್ನು ಬದಿಗೊತ್ತಿದ ಉದಾಹರಣೆಗಳು ಇವೆ.
ಖರ್ಗೆ ಅವರನ್ನೂ ಆಹ್ವಾನಿಸಿದ್ದಿದ್ದರೆ ಸಮಾರಂಭಕ್ಕೆ ಹೆಚ್ಚಿನ ಮೆರುಗು ಬರುತ್ತಿತ್ತು ಮತ್ತು ಬಿಜೆಪಿಯ ವರ್ಚಸ್ಸೂ ಹೆಚ್ಚುತ್ತಿತ್ತು. ಖರ್ಗೆಯವರ ಕಾಲದಲ್ಲಿ ಈ ಯೋಜನೆ ವೇಗ ಪಡೆಯದಿರಬಹುದು. ಆದರೆ, ಈ ಯೋಜನೆಗೆ ಅವರ ಕೊಡುಗೆಯೂ ಇದೆ. ಶಿಷ್ಟಾಚಾರ ಅಡ್ಡಿ ಬಂದಿದ್ದರೆ, ಹಿರಿಯರನ್ನು ಗೌರವಿಸಬೇಕು ಎನ್ನುವ ‘ಭಾರತೀಯ ಸಂಸ್ಕೃತಿ’ಯ ಹೆಸರಿನಲ್ಲಾದರೂ ಅವರನ್ನು ಆಮಂತ್ರಿಸಬೇಕಿತ್ತು.
ಈ ‘ರಾಜಕೀಯ’ ಮೋದಿಯವರ ಗಮನಕ್ಕೆ ಬಂದಿರಲಾರದು. ಖರ್ಗೆಯವರನ್ನು ನಡೆಸಿಕೊಂಡ ಬಗೆಯನ್ನು ಕಂಡು ಜನಸಾಮಾನ್ಯರೂ ಆಡಿಕೊಳ್ಳುವಂತಾಗಿದೆ. ರಾಜಕಾರಣ ನಿಂತ ನೀರಲ್ಲ ಮತ್ತು ಅದು ಬದಲಾಗುತ್ತಿರುತ್ತದೆ. ರಾಜಕಾರಣದಲ್ಲಿ ಏರಿಳಿತ ಇರುವುದನ್ನು ಕ್ಷುಲ್ಲಕ ರಾಜಕಾರಣ ಮಾಡುವವರು ತಿಳಿಯಬೇಕು.
–ರಮಾನಂದ ಶರ್ಮಾ,
ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.