‘ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆಯನ್ನು ಕ್ಷುಲ್ಲಕ ಕಾರಣಕ್ಕೆ ಮುಂದೂಡಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣಾ ಆಯೋಗದ ವಿರುದ್ಧ ಕಿಡಿ ಕಾರಿದ್ದಾರೆ. ಒಂದು ಸಾಂವಿಧಾನಿಕ ಸಂಸ್ಥೆಯು ತೆಗೆದುಕೊಂಡ ನಿರ್ಧಾರವನ್ನು ಸಾರ್ವಜನಿಕವಾಗಿ ತೆಗಳುವುದು ಮುಖ್ಯಮಂತ್ರಿಗೆ ಶೋಭೆ ತರುವುದಿಲ್ಲ. ಆಯೋಗ ತೆಗೆದುಕೊಂಡ ಕ್ರಮಕ್ಕೆ ಇವರ ಆಕ್ಷೇಪವಿದ್ದರೆ ನ್ಯಾಯಾಲಯದ ಬಾಗಿಲನ್ನು ತಟ್ಟಬಹುದಲ್ಲವೇ?
ಒಂದು ಮನೆಯೊಳಗೆ ಸಾವಿರಾರು ಸಂಖ್ಯೆಯಲ್ಲಿ ಮತದಾರರ ಗುರುತಿನ ಚೀಟಿಗಳು ಸಿಗುವುದು ಇವರಿಗೆ ‘ಕ್ಷುಲ್ಲಕ’ವೆನ್ನಿಸಿದರೆ ಹೇಗೆ? ಚುನಾವಣಾ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಸಂಚು ಈ ಪ್ರಕರಣದ ಹಿಂದೆ ಇದೆ ಎಂಬುದು ಮುಖ್ಯಮಂತ್ರಿಗೆ ಗೊತ್ತಿಲ್ಲದ ವಿಚಾರವೇನೂ ಅಲ್ಲ. ಪ್ರಕರಣದ ಬಗ್ಗೆ ಇನ್ನೂ ತನಿಖೆಯನ್ನೇ ನಡೆಸಿಲ್ಲ. ಆದರೂ ಮುಖ್ಯಮಂತ್ರಿ, ‘ನಮ್ಮ ಅಭ್ಯರ್ಥಿ ಯಾವುದೇ ಆಕ್ರಮ ಎಸಗಿಲ್ಲ, ಚುನಾವಣೆ ನಡೆಸಲು ಅವಕಾಶ ಕೊಡಬಹುದಿತ್ತು’ ಎಂದಿದ್ದಾರೆ.
‘ಮೂರೂ ಪಕ್ಷಗಳವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ, ಸತ್ಯ ಹೊರಬರುವ ನಿರೀಕ್ಷೆಯಲ್ಲಿದ್ದೇವೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ’ ಎಂದು ಮುಖ್ಯಮಂತ್ರಿ ಹೇಳಿದ್ದರೆ ಅವರ ಘನತೆ ಹೆಚ್ಚಾಗುತ್ತಿತ್ತು. ರಾಜಕಾರಣಿಗಳ ಇಂಥ ನಡೆಗಳಿಂದಾಗಿಯೇ ಜನ ಬೇಸತ್ತು ಹೋಗಿದ್ದಾರೆ.
ಮಂಜುನಾಥ ಸು.ಮ., ಚಿಂತಾಮಣಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.