ADVERTISEMENT

ಈ ಅನ್ಯಾಯ ಏಕೆ?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 15 ಜುಲೈ 2013, 19:59 IST
Last Updated 15 ಜುಲೈ 2013, 19:59 IST

ನಾವೆಲ್ಲರೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಾಗಿದ್ದು ಮೈಸೂರಿನಲ್ಲಿ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ಹಿಂದಿನ ಸರ್ಕಾರವು ಇದೇ  ಏಪ್ರಿಲ್ 1ರಿಂದ  ಬೆಂಗಳೂರಿನ ಸರ್ಕಾರಿ ನೌಕರರಿಗೆ ಮಾತ್ರ ಮನೆ ಬಾಡಿಗೆ ಭತ್ಯೆಯನ್ನು ಮೂಲ ವೇತನದ ಶೇ 25 ರಿಂದ ಶೇ 30ಕ್ಕೆ ಏರಿಸಿದೆ. ಆದರೆ ಬೇರೆ ಯಾವುದೇ ನಗರ ಮತ್ತು ರಾಜ್ಯದ ಇತರ ಭಾಗದ ನೌಕರರಿಗೆ ಹೆಚ್ಚಳವಾಗಿರುವುದಿಲ್ಲ.

ಈ ಹಿಂದೆಯೂ 2009-10ರಲ್ಲಿ ಬೆಂಗಳೂರಿನ ಮನೆ ಬಾಡಿಗೆ ಭತ್ಯೆಯನ್ನು ಮೂಲ ವೇತನದ ಶೇ 20 ರಿಂದ ಶೇ 25ಕ್ಕೆ ಹೆಚ್ಚಿಸಿ ಇತರ ಎಲ್ಲಾ ಭಾಗಗಳಿಗೆ ಕೇವಲ ಶೇ 1ರಷ್ಟು ಮಾತ್ರ ಹೆಚ್ಚಿಸಲಾಗಿತ್ತು. ಹೀಗಾಗಿ ಕಳೆದ ಎರಡು ಬಾರಿಯೂ  ಬೆಂಗಳೂರಿಗೆ ಮಾತ್ರ ಶೇ 10 ರಷ್ಟು ಹೆಚ್ಚಿಸಿ ರಾಜ್ಯದ ಇತರ ಭಾಗದ ನೌಕರರಿಗೆ ಶೇ 1 ರಷ್ಟು ಹೆಚ್ಚಳ ಮಾಡಿರುವುದು ಸಾಮಾಜಿಕ ನ್ಯಾಯವಾಗಿರುವುದಿಲ್ಲ.

2011ರ ಜನಗಣತಿಯಂತೆ ಮೈಸೂರು ನಗರದ ಜನಸಂಖ್ಯೆ ಸುಮಾರು 10 ಲಕ್ಷ ಮತ್ತು ಇತರ ಎಲ್ಲಾ ಮಹಾನಗರ ಪಾಲಿಕೆಗಳ ಜನಸಂಖ್ಯೆ 5ರಿಂದ 10 ಲಕ್ಷ ಮುಟ್ಟಿದೆ. ಇತ್ತೀಚಿನ ದಿನಗಳಲ್ಲಿ ರಾಜ್ಯದ ಎಲ್ಲಾ ಭಾಗಗಳಲ್ಲೂ ಮನೆ ಬಾಡಿಗೆ, ಜೀವನೋಪಾಯ ವೆಚ್ಚ ಹಲವು ಪಟ್ಟು ಹೆಚ್ಚಾಗಿರುತ್ತದೆ.

ಆದ್ದರಿಂದ ರಾಜ್ಯದ ಇತರ ಎಲ್ಲಾ ಭಾಗದ ನೌಕರರಿಗೂ, ಬೆಂಗಳೂರಿನಲ್ಲಿ ಕೆಲಸ ಮಾಡುವ ನೌಕರರಿಗೆ ಹೆಚ್ಚಳ ಮಾಡಿರುವ ಒಟ್ಟು (ಶೇ 10) ದರದ ಅರ್ಧದಷ್ಟಾದರೂ ಅಂದರೆ ಶೇ 5ರಷ್ಟು ಹೆಚ್ಚಳ ಮಾಡಿದಲ್ಲಿ ಎಲ್ಲರಿಗೂ ಸಾಮಾಜಿಕ ನ್ಯಾಯವನ್ನು ಒದಗಿಸಿಕೊಟ್ಟಂತಾಗುತ್ತದೆ. ಹೊಸ ಸರ್ಕಾರವು ಈ ನಿಟ್ಟಿನಲ್ಲಿ ಕ್ರಮ ಕೈಗೊಂಡು ಮನೆ ಬಾಡಿಗೆ ಭತ್ಯೆಯನ್ನು ಶೇ 5 ರಷ್ಟಾದರೂ ಹೆಚ್ಚಳ ಮಾಡಿ ರಾಜ್ಯದ ಇತರ ಎಲ್ಲಾ ಭಾಗದ ನೌಕರರಿಗೆ ಅನುಕೂಲ ಮಾಡುವಂತೆ ಮನವಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.