ಭಯೋತ್ಪಾದಕರ ವಿರುದ್ಧ ಸೂಕ್ತ ಕ್ರಮವನ್ನು ತೆಗೆದುಕೊಳ್ಳಲು ಕೇಂದ್ರ ಸರ್ಕಾರ ವಿಫಲವಾಗಿದೆ. ಕಸಾಬ್ ಮತ್ತು ಅಫ್ಜಲ್ ಗುರು ಈ ಎರಡು ಉದಾಹರಣೆಗಳೇ ಸಾಕು. ಇವರಿಗೆ ಶಿಕ್ಷೆ ಕೊಡಿಸಲು ಕೇಂದ್ರ ಸರ್ಕಾರಕ್ಕೆ ಮನಸ್ಸಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಬಹಳ ಕಷ್ಟವಾಗಿದೆ. ಕೇಂದ್ರ ಸರ್ಕಾರವನ್ನು ಕೇವಲ ದೂಷಿಸುವ ಕೆಲಸ ನಮ್ಮದಾಗಿರಬಾರದು.
ಈಗ ಜಾರಿಯಲ್ಲಿರುವ ಬ್ರಿಟಿಷ್ ಕಾಲದ ಕಾನೂನುಗಳು ಶಕ್ತಿಹೀನವಾಗಿವೆ. ಆದ್ದರಿಂದ ದೇಶದ್ರೋಹಿಗಳಿಗೆ ಅತಿಶೀಘ್ರವೇ ಶಿಕ್ಷೆಕೊಡುವಂತಹ ಕಠಿಣ ಕಾನೂನಿನ ಅವಶ್ಯಕತೆ ಇದೆ. ರಾಜ್ಯದಲ್ಲಿರುವ ವಿಧಾನ ಸಭೆಗಳು ಕೂಡ ಈ ವೈಫಲ್ಯತೆಗೆ ಕಾರಣವಾಗಿವೆ. ವಿಧಾನ ಸಭೆಯಲ್ಲಿ ಬಹುಮತವಿರುವ ಆಡಳಿತ ಪಕ್ಷ ತಮಗೆ ಬೇಕಾದ ಹಾಗೆ ಒಂದು ಠರಾವನ್ನು ಮಾಡಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವುದು ರಾಷ್ಟ್ರ ದ್ರೋಹಿಗಳ ಬೆಂಬಲಕ್ಕೆ ಸಾಕ್ಷಿ. ತಮಿಳು ನಾಡು ಮತ್ತು ಜಮ್ಮು ಕಾಶ್ಮೀರಿನಲ್ಲಿ ಈ ಬೆಳವಣಿಗೆ ನಡೆದಿರುವುದು ರಾಷ್ಟ್ರದ್ರೋಹಿಗಳ ಕೆಲಸಗಳಿಗೆ ಕುಮ್ಮಕ್ಕು ಕೊಟ್ಟಂತಾಗಿದೆ.
ಆದ್ದರಿಂದ ರಾಷ್ಟ್ರದ್ರೋಹಿಗಳಿಗೆ ಅನ್ವಯಿಸುವ ಒಂದು ಹೊಸ ಕಾನೂನು ಮಾಡಿ ಈ ಕಾನೂನಿನಡಿಯಲ್ಲಿ ಮೂರು ತಿಂಗಳ ಒಳಗೆ ವಿಚಾರಣೆ ಮುಗಿದು ಶಿಕ್ಷೆಯು ಪ್ರಕಟವಾಗಬೇಕು. ಒಂದು ಸಲ ಈ ವಿಶೇಷ ನ್ಯಾಯಾಲಯ ತೀರ್ಪು ಕೊಟ್ಟ ನಂತರ ಯಾರೂ ಅಡ್ಡಿ ಮಾಡಬಾರದು. ಶಿಕ್ಷೆಯನ್ನು ನೇರವಾಗಿ ಕೇಂದ್ರ ಸರ್ಕಾರ ಜಾರಿಗೆ ತರಲೇಬೇಕು. ರಾಷ್ಟ್ರಪತಿಗಳ ಗಮನಕ್ಕೆ ಬರಲಿ. ಹೀಗಾದರೆ ರಾಷ್ಟ್ರದ್ರೋಹಿಗಳನ್ನು ಒಬ್ಬೊಬ್ಬರನ್ನಾಗಿ ಮರಣದಂಡನೆಗೆ ಗುರಿ ಮಾಡಬಹುದು. ಇವರಿಗೆ ಯಾವ ರೀತಿಯ ಕ್ಷಮೆ ಅನುಕಂಪ ಕೊಡಬಾರದು. ಅನುಕಂಪ ತೋರಿದವರು ಮತ್ತು ಕ್ಷಮಾದಾನಕ್ಕೆ ಶಿಫಾರಸ್ಸು ಮಾಡುವವರು ರಾಷ್ಟ್ರದ್ರೋಹಿಗಳಾಗುತ್ತಾರೆ. ಒಟ್ಟಿನಲ್ಲಿ ಆರು ತಿಂಗಳ ಒಳಗೆ ಇವರನ್ನು ಗಲ್ಲಿಗೇರಿಸಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.