ದಿ. 29ರ ಸಂಚಿಕೆಯಲ್ಲಿ `ಅವೈಜ್ಞಾನಿಕ ಮೌಲ್ಯ ಮಾಪನ ಶುಲ್ಕ~ ಪತ್ರ ಓದಿ ಪ್ರತಿಕ್ರಿಯೆ. ಪರೀಕ್ಷಾ ವ್ಯವಸ್ಥೆಯ ಪಾರದರ್ಶಕತೆ ಕಾಪಾಡಿ ಕೊಳ್ಳಬೇಕಾದರೆ ಉತ್ತರ ಪತ್ರಿಕೆಗಳನ್ನು ಆಯಾ ವಿದ್ಯಾರ್ಥಿಗಳಿಗೆ ಹಿಂದಿರುಗಿಸುವುದೇ ಸೂಕ್ತ. ವಿದ್ಯಾರ್ಥಿಗಳು ಉತ್ತರ ಹೇಗೆ ಬರೆದಿದ್ದಾರೆ, ಅವರ ಸಾಧನೆ ಏನು ಎನ್ನುವುದು ಸ್ಪಷ್ಟವಾಗುತ್ತದೆ.
ಮರು ಮೌಲ್ಯಮಾಪನ, ಮರು ಎಣಿಕೆ, ಉತ್ತರ ಪತ್ರಿಕೆಯ ಜೆರಾಕ್ಸ್ ಪ್ರತಿ ನೀಡಿಕೆ ಇವೆಲ್ಲ ಅವೈಜ್ಞಾನಿಕ ವಿಧಾನ. ಮಂಡಲಿ ಮೌಲ್ಯ ಮಾಪನ ಮಾಡಿಸಿ ಆಯಾ ಶಾಲೆಗಳಿಗೆ ಉತ್ತರ ಪತ್ರಿಕೆಗಳನ್ನು ಕಳಿಸಬೇಕು ಮತ್ತೆ ಸ್ಥಳೀಯ ಶಿಕ್ಷಕರು ಪರಿಶೀಲಿಸಿ ಆಯಾ ವಿದ್ಯಾರ್ಥಿಗಳಿಗೆ ಕೊಡುವುದೇ ಸರಿಯಾದ ಕ್ರಮ.
ನಾನು ಇಪ್ಪತ್ತು ವರ್ಷಗಳ ಹಿಂದೆ ಅಮೆರಿಕಾದ ಶೈಕ್ಷಣಿಕ ಸಂಸ್ಥೆಯೊಂದರಲ್ಲಿ ಕರೆಸ್ಪಾಂಡೆನ್ಸ್ ಕೋರ್ಸ್ ತೆಗೆದುಕೊಂಡಿದ್ದೆ. ಈಗಿನಂತೆ ಆಗ ಇಂಟರ್ನೆಟ್, ಫೋನು ಇರಲಿಲ್ಲ. ಉತ್ತರವನ್ನು ಬರೆದು ಪೋಸ್ಟ್ ಮಾಡುತ್ತಿದ್ದೆ. ಅವರು ಮೌಲ್ಯ ಮಾಪನ ಮಾಡಿ ಅಂಕಪಟ್ಟಿಯೊಂದಿಗೆ ಉತ್ತರ ಪತ್ರಿಕೆಗಳನ್ನು ವಾಪಸ್ ಕಳುಹಿಸುತ್ತಿದ್ದರು.
ಉತ್ತರ ಪತ್ರಿಕೆ ನೋಡಿದ ಮೇಲೆ ನನಗೆ ಅನಿಸುತ್ತಿದ್ದದ್ದು; ಇನ್ನಷ್ಟು ಚೆನ್ನಾಗಿ ಬರೆಯಬಹುದಿತ್ತಲ್ಲ ಎಂದು. ಇನ್ನು ಮುಂದೆ ಈ ಬಗ್ಗೆ ಸಮಾಲೋಚಿಸಿ ಉತ್ತರ ಪತ್ರಿಕೆಯನ್ನು ವಾಪಸ್ ಕೊಡುವ ವ್ಯವಸ್ಥೆ ಜಾರಿಗೆ ತರಬೇಕೆಂದು ಕೋರುತ್ತೇನೆ. ಬೇಕಾದರೆ ನಿರ್ದಿಷ್ಟ ಶುಲ್ಕ ನಿಗದಿ ಮಾಡಿದರೆ ಆಯ್ತು. ಮುಂದಿನ ವರ್ಷ ಈ ವ್ಯವಸ್ಥೆ ಜಾರಿಗೆ ಬರಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.