ADVERTISEMENT

ಕನ್ನಡ ನಾಡಿಗೆ ಪ್ರಾದೇಶಿಕ ಪಕ್ಷ ಬೇಕು

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 12 ಡಿಸೆಂಬರ್ 2012, 19:50 IST
Last Updated 12 ಡಿಸೆಂಬರ್ 2012, 19:50 IST

ಇಂಗ್ಲೆಂಡಿನಲ್ಲಿರುವಂತೆ ಲಿಬರಲ್ ಮತ್ತು  ಕನ್ಸರ್ವೇಟಿವ್ ಪಕ್ಷಗಳು ಪ್ರಜಾಪ್ರಭುತ್ವಕ್ಕೆ ಮಾದರಿ. ಭಾರತದೇಶ ತನ್ನ ಸಂವಿಧಾನವನ್ನು ಇಂಗ್ಲೆಂಡಿನ ಮಾದರಿಯಲ್ಲಿಯೇ ರಚಿಸಿಕೊಂಡು ಬಂದಿದೆ. ಮತ್ತು ಅದು ಪ್ರಜಾತಂತ್ರವನ್ನು ಯಶಸ್ವಿಯಾಗಿ ನಿಭಾಯಿಸಿಕೊಂಡು ಬಂದಿದೆ.

ರಾಷ್ಟ್ರೀಯ ದೊಡ್ಡ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿ.ಜೆ.ಪಿ. ಪಕ್ಷಗಳು ಸರ್ಕಾರದ ಆಡಳಿತವನ್ನು ತಮ್ಮದನ್ನಾಗಿಸಿಕೊಳ್ಳಲು ಪ್ರಯತ್ನದಲ್ಲಿ ತೊಡಗಿವೆ. ಭಾರತೀಯರು ಜಾತಿ, ಮತ, ಪಂಥಗಳನ್ನು ಪೋಷಿಸಿಕೊಂಡು ಬಂದಿರುವುದರಿಂದ ದೇಶದಲ್ಲಿ ನೂರಾರು ಪಕ್ಷಗಳು ತಲೆಯೆತ್ತಿವೆ.

ಇದಲ್ಲದೆ ಕೇಂದ್ರದಲ್ಲಿ ರಾಷ್ಟ್ರೀಯ ಪಕ್ಷಗಳು ಆಡಳಿತ ನಡೆಸುತ್ತ ಬಂದಿರುವುದರಿಂದ, ವಿವಿಧ ರಾಜ್ಯಗಳ ಆಶೆ-ಆಕಾಂಕ್ಷೆಗಳನ್ನು, ಹಿತಾಭಿವೃದ್ಧಿಗಳನ್ನು ಸಮಾಧಾನಕರವಾಗಿ ಈಡೇರಿಸಲಾಗುತ್ತಿಲ್ಲ. ಹೀಗಾಗಿ ದೇಶದಲ್ಲಿ ಡಿ.ಎಂ.ಕೆ. ಮತ್ತು ಶಿವಸೇನೆಯಂಥಾ ಪಕ್ಷಗಳು ಹುಟ್ಟಿಕೊಂಡಿದ್ದು ತಮ್ಮಲ್ಲಿಯ ಜನರ ಅಭ್ಯುದಯವನ್ನು ತಾವು ಆರಿಸಿ ಕಳುಹಿಸಿದ ಶಾಸಕರಿಂದ ಈಡೇರಿಸಿಕೊಳ್ಳಲು ಸಮರ್ಥ ರೀತಿಯಲ್ಲಿ ಪ್ರಯತ್ನಿಸುತ್ತಲಿವೆ.

ಕನ್ನಡ ನಾಡಿನಲ್ಲಿ ಇಂದಿಗೂ ಬಗೆಹರಿಯದ ಗಡಿ ಸಮಸ್ಯೆ, ವಿದ್ಯುತ್ ಮತ್ತು ನೀರಿನ ಸಮಸ್ಯೆ ಉದ್ಯೋಗದಲ್ಲಿ ಪಕ್ಷಪಾತ ಮುಂತಾದವುಗಳು ಪೂರ್ತಿಯಾಗಿ ಬಗೆಹರಿಯಬೇಕಾದರೆ ನಮ್ಮ ರಾಜ್ಯಕ್ಕೆ ಪ್ರಾದೇಶಿಕ ಪಕ್ಷ ಅನಿವಾರ‌್ಯ. ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷ ನೆಲೆಯೂರಿ ನಿಲ್ಲಲಾರದೆಂಬ ನಿರಾಶೆಯಿಂದ ಕೈಚೆಲ್ಲಿ ಕುಳಿತರೆ ಕನ್ನಡಿಗರ ಹಿತಾಸಕ್ತಿಗೆ ಉಳಿಗಾಲವಿಲ್ಲ. ನಿಸ್ವಾರ್ಥ ಮುಂದಾಳುಗಳು ತಮ್ಮ ಜಿಗುಟತನದಿಂದ ಪ್ರಾದೇಶಿಕ ಪಕ್ಷ ಕಟ್ಟಬೇಕು. ಮತ್ತು ಅದನ್ನು ಬಲಾಢ್ಯ ಪಕ್ಷವನ್ನಾಗಿ ಬೆಳೆಸಬೇಕು.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.