ADVERTISEMENT

ಕರಾವಳಿ ಪಟ್ಟಣಗಳಿಗೆ ರೈಲು ಬೇಕು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 15:50 IST
Last Updated 21 ಫೆಬ್ರುವರಿ 2011, 15:50 IST

ಉತ್ತಮ ರೈಲು ಮಾರ್ಗವಿದ್ದರೂ, ರಾಜ್ಯದ ರಾಜಧಾನಿಯಿಂದ ನೇರವಾದ ರೈಲು ಸಂಪರ್ಕವಿಲ್ಲದ ಹಲವು ಪಟ್ಟಣಗಳು ನಮ್ಮ ರಾಜ್ಯದಲ್ಲಿ ಮಾತ್ರ ಸಿಗಲು ಸಾಧ್ಯವೇನೋ. ಬೆಂಗಳೂರಿನಿಂದ ರೈಲು ಮಾರ್ಗಗಳ ಸೌಲಭ್ಯವಿದ್ದರೂ, ನೇರವಾದ ರೈಲುಗಳಿಲ್ಲದ ನತದೃಷ್ಟ ಪಟ್ಟಣಗಳಲ್ಲಿ ಉಡುಪಿ, ಕುಂದಾಪುರ, ಹೊನ್ನಾವರ, ಭಟ್ಕಳ, ಕುಮಟಾ, ಕಾರವಾರ ಸೇರುತ್ತವೆ.

ಬೆಂಗಳೂರಿನಿಂದ ಮಂಗಳೂರಿಗೆ ರೈಲಿನಲ್ಲಿ ಬಂದರೂ, ಅಲ್ಲಿಂದಾಚೆಗೆ ಉಡುಪಿ - ಕಾರವಾರದತ್ತ ಸೂಕ್ತ ಸಂಪರ್ಕ ರೈಲು ಸಮಯಕ್ಕೆ ಸರಿಯಾಗಿ ಅನುಕೂಲವಿಲ್ಲದಿರುವುದು ಸಹಾ ಇಲ್ಲಿ ಎದ್ದು ಕಾಣುತ್ತದೆ. ಈ ಸಂದರ್ಭದಲ್ಲಿ ಕರ್ನಾಟಕದ ಜನರಿಗಾದ ಘನಘೋರ ಅನ್ಯಾಯಗಳನ್ನು ಹೇಳಿದರೆ ಅದು ಚರ್ವಿತ ಚರ್ವಣವಾದರೂ, ಬೆಂಗಳೂರಿನಿಂದ ಮಂಗಳೂರಿಗೆ ಬರುವ ರಾತ್ರಿ ರೈಲು, ಉತ್ತರಕ್ಕೆ ತಿರುಗಿ ಕುಂದಾಪುರಕ್ಕೋ, ಕಾರವಾರಕ್ಕೋ ಹೋಗುವ ಬದಲು ಕೇರಳದ ಕಣ್ಣೂರಿಗೆ ಪ್ರತಿದಿನವೂ ಹೋಗುತ್ತಿರುವ ವಿಚಾರವನ್ನು ನೆನಪಿಸಿಕೊಂಡರೆ ಮಾತ್ರ, ನಿಜಕ್ಕೂ ಮೈ ಪರಿಚಿಕೊಳ್ಳುವಂತಾಗುತ್ತದೆ. ಕೈಲಾಗದವ ಮೈಪರಿಚಿಕೊಂಡಂತೆಯೆ?

ಈಗಲಾದರೂ, ಸಂಬಂಧ ಪಟ್ಟವರು ಕರ್ನಾಟಕದ ಕರಾವಳಿಯ ಜನರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು. ರಾಜ್ಯದ ರಾಜಧಾನಿಯಿಂದ ನೇರ ರೈಲನ್ನು ಮಂಗಳೂರು ಮೂಲಕ, ಉಡುಪಿ, ಕುಂದಾಪುರ - ಕಾರವಾರದ ಕಡೆ ಓಡಿಸಿ, ಆ ಪ್ರದೇಶಗಳ ಅಭಿವೃದ್ದಿಗೆ ಸಹಕಾರ ನೀಡಬೇಕಾಗಿ ಪ್ರಾರ್ಥನೆ. ನೇರ ರೈಲಿನಿಂದಾಗಿ ಆ  ಪ್ರದೇಶದ ಪ್ರಗತಿಗೂ ಅನುಕೂಲ, ಅಲ್ಲಿನ ಜನರು ರಾಜಧಾನಿಗೆ ಬರಲಿಕ್ಕೂ ಸಹ ಸುಗಮ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.