ADVERTISEMENT

ಕಸದ ತೊಟ್ಟಿ ಇಡಿ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2011, 19:30 IST
Last Updated 12 ಸೆಪ್ಟೆಂಬರ್ 2011, 19:30 IST

ಕುಮಾರಸ್ವಾಮಿ ಬಡಾವಣೆಯ ಪೊಲೀಸ್ ಸ್ಟೇಷನ್ ಹಿಂಭಾಗದ ರಸ್ತೆಗಳಲ್ಲಿ ಕಸ ಸಂಗ್ರಹಿಸುವವರು ನಿತ್ಯವೂ ಬರುವುದಿಲ್ಲ. ಒಂದು ವೇಳೆ ಬಂದರೂ ಸರಿಯಾದ ಸಮಯಕ್ಕೆ ಬರುವುದಿಲ್ಲ.

ಕಸವನ್ನು ಹಾಕಲು ಯಾವುದೇ ತೊಟ್ಟಿಗಳು ಇಲ್ಲ. ಕಸ ಸಂಗ್ರಹಿಸುವವರು ಯಾರು ಹಣ ನೀಡುತ್ತಾರೋ ಅವರ ಮನೆಯ ಕಸವನ್ನು ಮಾತ್ರ ಸಂಗ್ರಹಿಸುತ್ತಾರೆ. ಉಳಿದವರನ್ನು ಅಲಕ್ಷ್ಯದಿಂದ ನೋಡುತ್ತಾರೆ.

ಇದರಿಂದ ಕಸವನ್ನು ಸ್ಥಳೀಯರು ಎಲ್ಲೆಂದರಲ್ಲೇ ಎಸೆಯುತ್ತಾರೆ. ಎಸೆದ ಕಸವನ್ನು ಬೀದಿ ನಾಯಿಗಳು ಎಳೆದು ತಂದು ರಸ್ತೆಗೆ ಹಾಕುತ್ತವೆ. ಇದರಿಂದ ರಸ್ತೆಯಲ್ಲಿ ಹೋಗುವವರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ. ಹಬ್ಬ ಹರಿದಿನಗಳಲ್ಲಿ ಕಸದ ಪ್ರಮಾಣ ಹೆಚ್ಚೇ ಇರುತ್ತದೆ.

ಆದ್ದರಿಂದ ಸಂಬಂಧಪಟ್ಟವರು ತಕ್ಷಣ ಪೊಲೀಸ್ ಸ್ಟೇಷನ್ ಹಿಂಭಾಗದ ರಸ್ತೆಗಳಾದ 71, 72, 73, 74, 75 ಹಾಗೂ 76ನೇ ಅಡ್ಡ ರಸ್ತೆಗಳ ಕೊನೆಯಲ್ಲಿ ಕಸದ ತೊಟ್ಟಿಗಳನ್ನು ಇಡಲಿ . ಇದರಿಂದ ಸ್ಥಳೀಯರಿಗೆ ಹಾಗೂ ಕಸ ಸಂಗ್ರಹಿಸುವವರಿಗೆ ಅನುಕೂಲವಾಗುತ್ತದೆ.
 - ಪ್ರಿಯ ಡಂಕಣ್ಣನವರ್

ಅಂಚೆ ವಿಳಂಬ
ಪ್ರಗತಿ ಲೇ ಔಟ್, ದೊಡ್ಡನೆಕ್ಕುಂದಿಯಿಂದ ನಾನಿ ರಾಖಿ ಹಬ್ಬಕ್ಕಿಂತ ಹತ್ತು ದಿನಗಳ ಮೊದಲೇ ಸಾಂಗ್ಲಿ ಹಾಗೂ ಕಿರ್ಲೋಸ್ಕರ ವಾಡಿಗೆ ಸ್ಪೀಡ್‌ಪೋಸ್ಟ್ ಮೂಲಕ ರಾಖಿ ಕಳುಹಿಸಿದ್ದೆ. ಆದರೆ ಅವು ಹಬ್ಬ ಮುಗಿದ ಹತ್ತು ದಿನದ ಮೇಲೆ ತಲುಪಿರುತ್ತವೆ. ಹೀಗಿದೆ ಅಂಚೆ ಇಲಾಖೆಯ ಕರ್ತವ್ಯ ಪ್ರಜ್ಞೆ!

 ಮೇಲಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಇದರಿಂದ ಈ ಇಲಾಖೆಯ ಮೇಲೆ ಇರುವ ವಿಶ್ವಾಸ ಹೋಗಿ ಜನರಲ್ಲಿ ಅಪನಂಬಿಕೆ ಉಂಟಾಗುತ್ತದೆ.
 - ವಿಷ್ಣು ರಾವ್

171 ಇ ಏಕಿಲ್ಲ
ಕಮಲಾನಗರ- ಕೋರಮಂಗಲದ ನಡುವೆ ಮಾರ್ಗ ಸಂಖ್ಯೆ 171ಇ ಬಸ್ ಸಂಚರಿಸುತ್ತಿತ್ತು. ಇದು ಬೆಳಿಗ್ಗೆ 9.10ಕ್ಕೆ ಕಮಲಾ ನಗರದಿಂದ ಹೊರಡುತ್ತಿತ್ತು. ಆದರೆ 15-20 ದಿನಗಳಿಂದ ಕಾಣೆಯಾಗಿದೆ. ಹಾಗಾಗಿ ಈ ಪ್ರದೇಶದ ನಾಗರಿಕರಿಗೆ, ಮಹಿಳೆಯರಿಗೆ ಮತ್ತು ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗಿರುತ್ತದೆ.
ಆದ್ದರಿಂದ ಈ ಮಾರ್ಗದ ಬಸ್ ಪುನಃ ಸಮರ್ಪಕವಾಗಿ ಓಡಿಸಲು ಬಿಎಂಟಿಸಿ ಅಧಿಕಾರಿಗಳಲ್ಲಿ ಮನವಿ.
 - ಎನ್. ಹರ್ಷವರ್ಧನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.