ADVERTISEMENT

ಕುಂದು ಕೊರತೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2017, 19:30 IST
Last Updated 28 ಜೂನ್ 2017, 19:30 IST
ಕುಂದು ಕೊರತೆ
ಕುಂದು ಕೊರತೆ   

ರಸ್ತೆ ತೆರವುಗೊಳಿಸಿ
ಲಕ್ಷ್ಮೀದೇವಿ ನಗರದ ರಂಗನಾಥ ಬಾರ್ ಬಳಿಯ ರಸ್ತೆಯಲ್ಲಿ ಬಿಬಿಎಂಪಿಯವರು ಒಳಚರಂಡಿ ರಿಪೇರಿಗೆಂದು ಹಲವು ವಾರಗಳಿಂದ  ಸಂಚಾರವನ್ನು ನಿರ್ಬಂಧಿಸಿದ್ದಾರೆ. ಈಗ ಒಳಚರಂಡಿ ಕಾರ್ಯ ಮುಗಿದಿದ್ದರೂ ರಸ್ತೆ  ಸಂಚಾರಕ್ಕೆ ತೆರವುಗೊಳಿಸದಿರುವುದರಿಂದ ಬಸ್ಸುಗಳು, ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ದಯವಿಟ್ಟು ತಕ್ಷಣ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಬೇಕೆಂದು ಮನವಿ ಮಾಡುತ್ತಿದ್ದೇವೆ.

ಲಕ್ಷ್ಮೀದೇವಿ ನಗರ ನಿವಾಸಿ

ಬೀದಿ ಕಾಮಣ್ಣರ ಹಾವಳಿ ತಪ್ಪಿಸಿ
ಕೋರಮಂಗಲದ ವೆಂಕಟಾಪುರ ರಸ್ತೆಯಲ್ಲಿ ಬೀದಿ ಕಾಮಣ್ಣರ ಹಾವಳಿ ಹೆಚ್ಚಾಗಿದೆ. ದಿನ ಬೆಳಿಗ್ಗೆ ಮತ್ತು ಸಂಜೆ ರಸ್ತೆ ಬದಿ ನಿಲ್ಲುವ ಇವರು  ಹುಡುಗರನ್ನು ಕರೆದು ಅಸಭ್ಯವಾಗಿ ಮಾತನಾಡುವುದು, ಹೊಡೆಯುವುದು ಮಾಡುತ್ತಿದ್ದಾರೆ. ಹುಡುಗಿಯರನ್ನು  ರೇಗಿಸುತ್ತಾರೆ.   ಅವರಿಗೆ ವಿರುದ್ಧವಾಗಿ ಮಾತನಾಡುವವರಿಗೆ ಹೊಡೆಯಲು ಮುಂದಾಗುತ್ತಾರೆ. ಸಂಬಂಧಪಟ್ಟ ಪೊಲೀಸರು ಸಮಸ್ಯೆ ಬಗೆಯಹರಿಸಬೇಕು ಎಂದು ಕೋರುತ್ತೇನೆ. 
ನಂದೀಪ್, ಕೋರಮಂಗಲ

ADVERTISEMENT

ಮರ ತೆರವಿಗೆ ಮನವಿ
ಕಾಚರಕನಹಳ್ಳಿಯಲ್ಲಿ ಒಂದು ತಿಂಗಳ ಹಿಂದೆ ಜೋರಾಗಿ ಬಂದ ಮಳೆಗೆ ರಸ್ತೆಗೆ ಬಿದ್ದಿರುವ ಮರವನ್ನು ಇಲ್ಲಿಯವರೆಗೆ ತೆರವು ಮಾಡಿಲ್ಲ. ಇದರಿಂದ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿದೆ. ಮತ್ತು ಬಿದ್ದ ಮರ ಕೊಳೆಯುತ್ತಿದೆ.

ಬಿಬಿಎಂಪಿ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಬಿದ್ದಿರುವ ಮರವನ್ನು ತೆರವುಗೊಳಿಸಬೇಕಾಗಿ ಮನವಿ.
ಕಾಚರಕನಹಳ್ಳಿ ನಿವಾಸಿಗಳು

ಕಾಮಗಾರಿ ವ್ಯವಸ್ಥಿತವಾಗಿ ನಡೆಯಲಿ
ನಾಗರಬಾವಿಯ 2ನೇ ಬ್ಲಾಕ್, 1ನೇ ಎಚ್ ಮುಖ್ಯರಸ್ತೆಯಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ.

ಬೇರೆ ಕಡೆ ಪೈಪ್‌ ಅಳವಡಿಸಿ ಚರಂಡಿ ನೀರು ಪೈಪ್‌ನಲ್ಲಿ ಹರಿಯುವಂತೆ ಮಾಡಿದರೆ, ಇಲ್ಲಿ ಪೈಪ್ ಹಾಕದೆ ತೆರೆದ ಮಾದರಿಯಲ್ಲಿ ಚರಂಡಿ ನಿರ್ಮಿಸಲಾಗುತ್ತಿದೆ. ಇದರಿಂದ ಚರಂಡಿ ತುಂಬಿದಾಗ ರಸ್ತೆಗೆ ನೀರು ಹರಿದು,  ದುರ್ವಾಸನೆ ಹರಡುವ ಸಾಧ್ಯತೆ ಇರುತ್ತದೆ. ಪೈಪ್ ಅಳವಡಿಸಿ ವ್ಯವಸ್ಥಿತವಾಗಿ ಚರಂಡಿ  ನಿರ್ಮಾಣ ಮಾಡಬೇಕೆಂಬುದು ಸಂಬಂಧಪಟ್ಟವರಲ್ಲಿ ಮನವಿ.
ಸ್ಥಳೀಯ ನಿವಾಸಿ

ಕಟ್ಟಡ ತ್ಯಾಜ್ಯ  ಸುರಿಯುವುದು ತಪ್ಪಿಸಿ
ಹೊಸಕೆರೆಹಳ್ಳಿ ವರ್ತುಲ ರಸ್ತೆಯ ವೀರಭದ್ರನಗರದಿಂದ ರಾಜರಾಜೇಶ್ವರಿ ನಗರಕ್ಕೆ ಸಂಪರ್ಕ ಕಲ್ಪಿಸುವ ಹೊಸಕೆರೆಹಳ್ಳಿ ಕೆರೆಕೋಡಿ ರಸ್ತೆಯುದ್ದಕ್ಕೂ ಒಂದು ಬದಿಯಲ್ಲಿ ಕಟ್ಟಡ ತ್ಯಾಜ್ಯವನ್ನು   ಸುರಿಯುತ್ತಿರುವುದರಿಂದ ಜನರ ಓಡಾಟ ಮತ್ತು ವಾಹನಗಳ ಸಂಚಾರಕ್ಕೆ ತೊಡಕಾಗಿದೆ.

ಟ್ರ್ಯಾಕ್ಟರ್‌ಗಳು ಹಗಲಿನಲ್ಲೂ ರಾತ್ರಿಯಲ್ಲೂ ತ್ಯಾಜ್ಯ ತಂದು ಸುರಿಯುತ್ತಿರುವುದು ನೋಡಿದರೆ ಅವರಿಗೆ ಬಿಬಿಎಂಪಿ ಸಿಬ್ಬಂದಿ ಬಗ್ಗೆ ಭಯವೇ ಇದ್ದಂತಿಲ್ಲ. ರಸ್ತೆ ಬದಿಯನ್ನು ಆವರಿಸಿಕೊಂಡಿರುವ ಕಟ್ಟಡ ತ್ಯಾಜ್ಯ ರಸ್ತೆಗೆ ಇಳಿಯುವ ಮೊದಲೇ ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತುಕೊಂಡು ಅಲ್ಲಿ ತ್ಯಾಜ್ಯ ಸುರಿಯುವವರ ವಿರುದ್ಧ ಕ್ರಮ ಕೈಗೊಳ್ಳಬೇಕು.         
ಬೈರಮಂಗಲ ರಾಮೇಗೌಡ,  ಪುಷ್ಪಗಿರಿನಗರ, ಹೊಸಕೆರೆಹಳ್ಳಿ

ಸ್ವಚ್ಛತೆಗೆ ಮನವಿ
ಶ್ರೀರಾಮಪುರ ರೈಲ್ವೆ ಬ್ರಿಡ್ಜ್‌ ಬಳಿ ಚರಂಡಿ ಒಡೆದು ಕೊಳಚೆ ನೀರು ರಸ್ತೆಗೆ ಹರಿಯುತ್ತಿದೆ. ಇದರಿಂದ ಈ ಸ್ಥಳದಲ್ಲಿ ಕೆಟ್ಟ ವಾಸನೆ ಬರುತ್ತಿದ್ದು, ಸಂಚಾರ ಮಾಡುವುದೇ ದುಸ್ತರವಾಗಿದೆ. ಅಧಿಕಾರಿಗಳು ಇತ್ತ ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕಿದೆ.
   ಹಿರಿಯ ನಾಗರಿಕರು, ಶ್ರೀರಾಮಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.