ADVERTISEMENT

ಕೆಪಿಎಸ್‌ಸಿ ಅವ್ಯವಸ್ಥೆಗೆ ಕೊನೆಯಿಲ್ಲವೇ?

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2011, 19:30 IST
Last Updated 27 ಫೆಬ್ರುವರಿ 2011, 19:30 IST

ಕರ್ನಾಟಕ ಲೋಕಸೇವಾ ಆಯೋಗವು ಎಸ್‌ಡಿಎ ಮತ್ತು ಎಫ್‌ಡಿಎ ಹುದ್ದೆಗಳಿಗಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಅದು ಹೊರಡಿಸಿದ ಅಧಿಸೂಚನೆಯಲ್ಲಿ ಅಂಗವಿಕಲ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಹತ್ತು ವರ್ಷಗಳ ಸಡಿಲಿಕೆ ಇದೆ ಎಂದು ತಿಳಿಸಿರುತ್ತದೆ. ಆದರೆ ಇಂಟರ್‌ನೆಟ್‌ನಲ್ಲಿ ಅರ್ಜಿಯನ್ನು ಭರ್ತಿಮಾಡಲು ಹೋದರೆ ವಯೋಮಿತಿ ಸಡಲಿಕೆ ಮಾಡಿರುವವರ ಪಟ್ಟಿಯಲ್ಲಿ ಅಂಗವಿಕಲ ಅಭ್ಯರ್ಥಿಗಳ ಗುಂಪಿನ ಹೆಸರೇ ಇಲ್ಲ.

ಎರಡನೆಯದಾಗಿ ಅಂಗವಿಕಲತೆ ಪ್ರಮಾಣ ಪತ್ರವನ್ನು ಐದು ವರ್ಷಗಳಿಗೆ ನೀಡಲಾಗುತ್ತಿದೆ. ಪುನಃ ಪುನಃ ಈ ಪ್ರಮಾಣ ಪತ್ರವನ್ನು ನೀಡುವುದಿಲ್ಲ. ಆದರೆ ಮೀಸಲಾತಿ ಕೋರುವವರು ಅಧಿಸೂಚನೆ ಹೊರಟ ದಿನಾಂಕದ ನಂತರ ಮತ್ತು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದ ಒಳಗೆ ಪಡೆದ ಪ್ರಮಾಣ ಪತ್ರಗಳನ್ನು ಮಾತ್ರ ಮಾನ್ಯ ಮಾಡಲಾಗುವುದು ಎಂದು ತಿಳಿಸಿದೆ, ಹಾಗಾದರೆ ಅಂಗವಿಕಲ ಅಭ್ಯರ್ಥಿಗಳು ಏನು ಮಾಡಬೇಕು?

ಆಯೋಗವು ಪ್ರತಿಬಾರಿ ಅರ್ಜಿ ಕರೆದಾಗಲೂ ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಕೈಗೊಂಡ ಬಗ್ಗೆ ಮತ್ತು ಗ್ರಾಮೀಣ ಅಭ್ಯರ್ಥಿಯಾಗಿದ್ದ ಬಗ್ಗೆ ಅಧಿಸೂಚನೆ ಹೊರಡಿಸಿದ ನಂತರ ಅಥವಾ ಅದಕ್ಕಿಂತ ಆರು ತಿಂಗಳ ಮುಂಚೆ ಪಡೆದ ಪ್ರಮಾಣ ಪತ್ರಗಳನ್ನು ಮಾತ್ರ ಮಾನ್ಯ ಮಾಡುವುದಾಗಿ ತಿಳಿಸುತ್ತದೆ.  ಒಬ್ಬ ವ್ಯಕ್ತಿ ಒಮ್ಮೆ ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಕೈಗೊಂಡ ಮೇಲೆ ಅದು ಶಾಶ್ವತ. ಅದರಲ್ಲಿ ಬದಲಾವಣೆ ಇಲ್ಲ. ಅಂದ ಮೇಲೆ ಪ್ರತಿಬಾರಿ ಪ್ರಮಾಣಪತ್ರ ಪಡೆಯಬೇಕೆಂಬ ನಿಯಮವೇಕೆ?

ಎಸ್‌ಡಿಎ. ಮತ್ತು ಎಫ್‌ಡಿಎ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮಾರ್ಚ್ 8 ಕೊನೆಯ ದಿನವಾಗಿರುವುದರಿಂದ ಕಾಲಾವಕಾಶ ತುಂಬ ಕಡಿಮೆ ಇದೆ. ಆದ್ದರಿಂದ ಈ  ಸಂದೇಹಗಳಿಗೆ ಸ್ಪಷ್ಟೀಕರಣ ನೀಡಬೇಕೆಂದು ಲೋಕಸೇವಾ ಆಯೋಗವನ್ನು ಕೋರುತ್ತೇನೆ.  ಆಯೋಗವು ತನ್ನ ಅಧಿಸೂಚನೆಯಲ್ಲಿ ಸಹಾಯವಾಣಿ ನಂಬರುಗಳನ್ನಾಗಿ 90363553926/27 ನೀಡಿದೆ. ಆದರೆ ಈ ಎರಡು ಸಂಖ್ಯೆಗಳು ಕಾರ್ಯವನ್ನೇ ಮಾಡುತ್ತಿಲ್ಲ. ಅಂದಮೇಲೆ ಅಭ್ಯರ್ಥಿಗಳು ಯಾರನ್ನು ಸಂಪರ್ಕಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.