ರಾಜ್ಯದ ಪ್ರವಾಸಿ ಕೇಂದ್ರಗಳಿಗೆ ಬರುವ ಪ್ರವಾಸಿಗರಿಗೆ ಸ್ಥಳದ ಮಾಹಿತಿ ನೀಡಲು ಪ್ರವಾಸಿ ಗೈಡ್ಗಳಿದ್ದಾರೆ. ಇವರು ಪ್ರವಾಸೋದ್ಯಮ ಇಲಾಖೆಯಿಂದ ಮಾನ್ಯತೆ ಪಡೆದ ಗೈಡ್ಗಳು.
ಅವರಿಗೆ ಇಲಾಖೆ ಗುರುತಿನ ಚೀಟಿ ಸಹಾ ನೀಡಿದೆ. ಪ್ರವಾಸಿಗರು ನೀಡುವ ಅಲ್ಪ ಮೊತ್ತದ ಹಣವೇ ಅವರಿಗೆ ಜೀವನಾಧಾರ.
ಹಿಂದೆ ಪ್ರವಾಸೋದ್ಯಮ ಮಂತ್ರಿಯಾಗಿದ್ದ ಜನಾರ್ದನ ರೆಡ್ಡಿಯವರಿಗೆ `ಕರ್ನಾಟಕ ರಾಜ್ಯ ಪ್ರವಾಸಿ ಮಾರ್ಗದರ್ಶಿ (ಗೈಡ್)ಗಳ ಸಂಘ~ ಮನವಿ ಸಲ್ಲಿಸಿ ಗೌರವ ಧನ ನೀಡುವಂತೆ ಒತ್ತಾಯಿಸಿತ್ತು.
ಮನವಿಗೆ ಸ್ಪಂದಿಸಿದ ಸಚಿವರು ತಿಂಗಳಿಗೆ 1,000 ರೂ ಗೌರವ ಧನ ಮತ್ತು ವರ್ಷಕ್ಕೆ ಎರಡು ಜೊತೆ ಸಮವಸ್ತ್ರ ನೀಡುವ ಭರವಸೆ ನೀಡಿದ್ದರು. ಮುಖ್ಯಮಂತ್ರಿಯವರ ಜತೆ ಸಮಾಲೋಚಿಸಿ ಸರ್ಕಾರಿ ಆದೇಶ ಹೊರಡಿಸುವುದಾಗಿ ತಿಳಿಸಿದ್ದರು.
ರಾಜ್ಯದಲ್ಲಿ 464 ಗೈಡ್ಗಳಿದ್ದಾರೆ. ಅವರ ಜೀವನ ಮಟ್ಟ ಹೇಳಿಕೊಳ್ಳುವಂತಿಲ್ಲ. ಹಿಂದಿನ ಸಚಿವರ ಭರವಸೆ ಕಾರ್ಯರೂಪಕ್ಕೆ ಬಂದರೆ ಅವರ ಬದುಕಿಗೆ ಸ್ವಲ್ಪ ನೆಮ್ಮದಿ ಸಿಗುತ್ತದೆ.
ಪ್ರವಾಸೋದ್ಯಮ ಖಾತೆಯನ್ನು ಈಗ ಮುಖ್ಯಮಂತ್ರಿ ಸದಾನಂದ ಗೌಡರೇ ನೋಡಿಕೊಳ್ಳುತ್ತಾರೆ. 3-4 ವರ್ಷಗಳ ಈ ಹಳೆಯ ಬೇಡಿಕೆಯನ್ನು ಅವರು ಪರಿಗಣಿಸಿ ಪ್ರವಾಸಿ ಗೈಡ್ಗಳ ಜೀವನಕ್ಕೆ ದಾರಿ ಮಾಡಿಕೊಡಬೇಕು ಎಂದು ವಿನಂತಿಸುತ್ತೇನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.