ADVERTISEMENT

ಗೋಮಾತೆಗೆ ದ್ರೋಹ

ಡಾ.ಮುಮ್ತಾಜ್‌ ಅಲಿ ಖಾನ್ ಬೆಂಗಳೂರು
Published 16 ಡಿಸೆಂಬರ್ 2012, 19:59 IST
Last Updated 16 ಡಿಸೆಂಬರ್ 2012, 19:59 IST

ಬೆಳಗಾವಿ ಅಧಿವೇಶನದಲ್ಲಿ  ಸರ್ಕಾರ ಮಾಡಿದ ಅತ್ಯಂತ ವಿಷಾದಕರ ಹಾಗೂ ದುರಂತ ನಾಟಕವೇನೆಂದರೆ ಗೋ ರಕ್ಷಣೆ ಬದಲು ಗೋವಧೆಗೆ ಅವಕಾಶ ಮಾಡಿಕೊಟ್ಟಿದ್ದು. ಸರ್ಕಾರ ಇಷ್ಟು ದಿನ ಹೇಳುತ್ತಾ ಬಂದಿದ್ದು ಗೋವಧೆಗೆ ಯಾವ ಕಾರಣಕ್ಕೂ ಅನುಮತಿ ಕೊಡುವುದಿಲ್ಲ ಎಂದು. ಇದಕ್ಕಾಗಿ ಗೋವಧೆ ಪ್ರತಿಬಂಧಕ ಮತ್ತು ಜಾನುವಾರು ಪರಿರಕ್ಷಣೆ (ತಿದ್ದುಪಡಿ) ವಿಧೇಯಕವನ್ನು ಮಂಡಿಸಿತು. ಪ್ರತಿಪಕ್ಷ ಸದಸ್ಯರು ಪ್ರತಿಭಟಿಸಿ ಸಭಾತ್ಯಾಗ ಮಾಡಿದರು.

ಈ ವಿಧೇಯಕದಿಂದ ಗೋಮಾತೆಗೆ ರಕ್ಷಣೆ ಮತ್ತು ಗೌರವ ಸಲ್ಲಿಸಿದ್ದೇವೆ ಎಂದು ಬಿಜೆಪಿ ಸದಸ್ಯರು ಸಂತೋಷ ಪಟ್ಟಿದ್ದಾರೆ. ಆದರೆ ವಾಸ್ತವವಾಗಿ ಹೀಗಾಗಿಲ್ಲ.
ನಾನು ಸುಮಾರು ಇಪ್ಪತ್ತು ವರ್ಷಗಳಿಂದ ಗೋ ವಧೆಯ ವಿರೋಧ ಮಾಡುತ್ತ ಬಂದಿದ್ದೇನೆ. ಆದರೆ ಗೋವು ಅಂದರೆ ಗೋವು ಮಾತ್ರ. ಇದರ ಪರಿಭಾಷೆಗೆ ಹೊಸ ಅರ್ಥ ಕೊಟ್ಟು ಎಮ್ಮೆ, ಕೋಣ ಬಿಟ್ಟು ಮಿಕ್ಕ ಎತ್ತು ಇತ್ಯಾದಿ ಪ್ರಾಣಿಗಳು ಸೇರಿವೆ ಅಂದರೆ ಒಪ್ಪಲು ಸಾಧ್ಯವಿಲ್ಲ. ಗೋಮಾತೆಗೆ ವಿಶೇಷ ಅರ್ಥವಿದೆ, ಸ್ಥಾನಮಾನವಿದೆ, ಗೌರವವಿದೆ. ಇದಕ್ಕೆ ಅನೇಕ ಕಾರಣಗಳಿವೆ.

ಪ್ರವಾದಿ ಮೋಸಸ್‌ರವರ ಕಾಲದಲ್ಲಿ ಒಬ್ಬ ವೃದ್ಧನ ಕೊಲೆಯಾಯಿತು. ಕೊಲೆಗಾರ ಯಾರು ಎಂಬುದು ಗೊತ್ತಾಗಲಿಲ್ಲ. ಪ್ರವಾದಿಯವರನ್ನು ಕೇಳಿದಾಗ ಅವರು ಹೇಳಿದರು,  ಒಂದು ಗೋವನ್ನು ವಧೆ ಮಾಡಿ, ಅದರ ಮಾಂಸದ ಒಂದು ತುಂಡನ್ನು ಮಡಿದ ವ್ಯಕ್ತಿಯ ದೇಹದ ಮೇಲಿಡಿ ನಂತರ ಏನಾಗಬಹುದೆಂಬುದನ್ನು ಕಾದು ನೋಡಿ. ಜನರು ಹಾಗೆಯೇ ಮಾಡಿದರು. ಮಡಿದ ವ್ಯಕ್ತಿಗೆ ಒಂದು ಕ್ಷಣ ಜೀವ ಬಂತು. ನನ್ನನ್ನು ಕೊಂದವನು ನನ್ನ ಸಹೋದರನ ಮಗ  ಎಂದು ಹೇಳಿದ ಕೂಡಲೇ ಮತ್ತೆ ಪ್ರಾಣ ಹೋಯಿತು.

ಈಗ ನಮ್ಮ ಮುಂದಿರುವ ವಿಧೇಯಕದಿಂದ ಗೋ ಭಕ್ತರು ಗೋವಿನ ವಯಸ್ಸು ಹದಿನೈದು ವರ್ಷ ಆದ ಕೂಡಲೇ ಕಸಾಯಿಖಾನೆಗೆ ತೆಗೆದುಕೊಂಡು ಹೋಗಬಹುದೆಂದು ಬಹಿರಂಗವಾಗಿ ರಹದಾರಿ ಕೊಟ್ಟಂತಾಯಿತು. ಇದೇನಾ ಭಕ್ತರ ಅಭಿಮಾನ, ಗೌರವ ಗೋಮಾತೆಗೆ?

ಗೋಮಾತೆ ಸಾಯುವವರೆಗೂ ಅದನ್ನು ಕಾಪಾಡಬೇಕು. ಸತ್ತ ನಂತರವೂ ವಧೆ ಮಾಡದೆ ಭೂತಾಯಿಯ ವಶಕ್ಕೆ ಕೊಡಬೇಕು. ಗೋಮಾತೆ ವಧೆಯನ್ನು ಮಾತ್ರ ನಿಷೇಧಿಸಬೇಕು. ಮಿಕ್ಕ ಪ್ರಾಣಿಗಳನ್ನು ಈ ವಿಧೇಯಕದಿಂದ ಮುಕ್ತ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.