ADVERTISEMENT

ಘನತೆಗೆ ಹೊಂದದ ಮಾತು

ಪ್ರೊ.ಎನ್‌.ವಿ.ಅಂಬಾಮಣಿ ಮೂರ್ತಿ ಬೆಂಗಳೂರು
Published 4 ಫೆಬ್ರುವರಿ 2014, 19:30 IST
Last Updated 4 ಫೆಬ್ರುವರಿ 2014, 19:30 IST

‘ಅನಂತಮೂರ್ತಿ ಯಾರು ಎಂದ ರಾಜ್ಯಪಾಲ’ ಎಂಬ ಶೀರ್ಷಿಕೆಯಡಿ (ಪ್ರ.ವಾ. ಜ.31) ಪ್ರಕಟವಾದ ಸುದ್ದಿ ಕುರಿತು ನನ್ನ ಪ್ರತಿಕ್ರಿಯೆ. ‘ಅನಂತಮೂರ್ತಿ ಯಾರು? ಅವರೊಬ್ಬ ರೋಗಿ. ಡಯಾಲಿಸಿಸ್‌ಗೆ ಒಳಗಾಗು­ತ್ತಿರುವ ವ್ಯಕ್ತಿಯೊಂದಿಗೆ ನಾನು ವಾದ ಮಾಡುವ ಅವಶ್ಯಕತೆ ಇಲ್ಲ. ಅವರು ರಾಜ್ಯಪಾಲರ ಪರಮಾ­ಧಿಕಾರ­ವನ್ನು ಪ್ರಶ್ನಿಸುತ್ತಿದ್ದಾರೆ’ ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್‌ ಹೌಹಾರಿದ್ದಾರೆ.

ಇಲ್ಲಿ ರಾಜ್ಯಪಾಲರು, ಕುಲಪತಿ ಸ್ಥಾನಕ್ಕೆ ಆಯ್ಕೆ ಮಾಡಿರುವ ಕ್ರಮದ ಬಗ್ಗೆ ನಾನು ಪ್ರತಿಕ್ರಿಯಿಸುತ್ತಿಲ್ಲ. ಬಹುಶಃ ಅವರ ಆಯ್ಕೆಯೇ ಅಂತಿಮ ಇರಬಹುದು. ಆದರೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ, ಚಿಂತಕರಾಗಿರುವ  ಅನಂತ­ಮೂರ್ತಿ ಅವರನ್ನು ವೈಯಕ್ತಿಕವಾಗಿ   ತೇಜೋ­­ವಧೆ ಮಾಡಿರುವುದು ರಾಜ್ಯಪಾಲರ ಘನತೆಗೆ ತಕ್ಕುದಲ್ಲ.

ಬದುಕಿನ ಮುಸ್ಸಂಜೆಯಲ್ಲಿ ವಯೋ­ಸಹಜವಾದ ರೋಗ–ರುಜಿನಗಳು ಮನುಷ್ಯ­ನನ್ನು ಕಾಡುವುದು ಅತ್ಯಂತ ಸಾಮಾನ್ಯ ಸಂಗತಿ. ಯಾರೂ ಇದರಿಂದ ಹೊರತಲ್ಲ. ಡಯಾಲಿಸಿ­ಸ್‌ಗೆ ಒಳಗಾಗಿರುವ ಕಾರಣಕ್ಕೆ ಅನಂತಮೂರ್ತಿಯವರ ವ್ಯಕ್ತಿತ್ವಕ್ಕಾಗಲಿ, ಅವರ ಮನಸ್ಥಿತಿಗಾಗಲಿ ಮುಕ್ಕಾಗುವುದು ಸಾಧ್ಯವಿಲ್ಲ.

ಇಂದಿನ ಆಧುನಿಕ ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಗಂಭೀರ ರೋಗಗಳಿಗೆ ಚಿಕಿತ್ಸೆ ಪಡೆದು ಆರೋಗ್ಯವಂತರಾಗಿ ಚಟುವಟಿಕೆ­ಯಿಂದ ಬದುಕು­ವುದು ಸಾಧ್ಯವಾಗಿರುವಾಗ, ಡಯಾಲಿಸಿಸ್‌ಗೆ ಒಳಗಾಗಿರುವುದೇ ಕುಂದು ಎಂಬಂತೆ ರಾಜ್ಯ­ಪಾಲರು ಕ್ಷುಲ್ಲಕವಾಗಿ ಮಾತನಾ­ಡಿ­ರು­ವುದು, ಅವರ ಸ್ಥಾನಕ್ಕೆ ಯೋಗ್ಯವಾದುದಲ್ಲ. ಇದು ಡಯಾ­­ಲಿಸಿ­ಸ್‌ಗೆ ಒಳಗಾಗಿರುವ ಅಸಂಖ್ಯಾತ ರೋಗಿ­ಗಳ ಆತ್ಮಸ್ಥೈರ್ಯವನ್ನು ಕುಂದಿಸು­ವಂಥದು.

ಇನ್ನು ತಮ್ಮನ್ನು ಪ್ರಶ್ನಿಸಿದ ಪತ್ರಕರ್ತರ ಮೇಲೂ ರಾಜ್ಯಪಾಲರು ವಾಕ್‌ಪ್ರಹಾರ ಮಾಡಿ­­­ರುವುದು ಅನುಚಿತವಾದುದು. ಪ್ರಜಾ­ಪ್ರಭುತ್ವ­­ದಲ್ಲಿ ದೇಶದ ಅತ್ಯುನ್ನತ ಸ್ಥಾನದಲ್ಲಿ­ರುವವರನ್ನೂ ಪ್ರಶ್ನಿಸುವ ಹಕ್ಕು ಒಬ್ಬ ಸಾಮಾನ್ಯ ಪ್ರಜೆಗೆ ಇದೆ. ರಾಜ್ಯಪಾಲರು ಹೇಗೆತಾನೆ ಪ್ರಶ್ನಾತೀತ ಪರಮಾಧಿಕಾರ ಉಳ್ಳವ­ರಾಗುತ್ತಾರೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.